ಕುಂಬಳೆ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಬುದ್ದರು ಕಾರ್ಯವೆಸಗುತ್ತಿರುವುದು ಸಾಮಾಜಿಕ ಸ್ವಾಥ್ಯಕ್ಕೆ ಭಾರೀ ತೊಡಕಾಗುತ್ತಿದ್ದು ಬದುಕಿರುವವರನ್ನು ಜೀವಂತ ಕೊಲ್ಲುವ ಮೂಲಕ ಒಂದರ್ಥದಲ್ಲಿ ಕೊಲೆಗಾರರಾಗುತ್ತಿರುವುದು ನೋಡಿದರೆ ಸರ್ಕಾರ ಕಠಿಣ ನಿಬಂಧನೆಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಕಾಲ ದೂರವಿಲ್ಲ.
ಕುಂಬಳೆಯ ಖ್ಯಾತ, ಹಿರಿಯ ವೈದ್ಯರಾದ ಡಾ.ಸರ್ವೇಶ್ವರ ಭಟ್ ಅವರ ಹೆಸರಲ್ಲಿ ಇಂತಹದೇ ಪ್ರಚಾರವೊಂದು ಇಂದು ನಡೆದಿದ್ದು ನಾಗರಿಕ ಸಮಾಜ ಅನಾಗರಿಕರ ಅಪ್ರಬುದ್ದತೆಯಿಂದ ತಲೆ ತಗ್ಗಿಸುವಂತೆ ಮಾಡಿದೆ.
ಆಗಿದ್ದೇನು!?
ಕುಂಬಳೆಯಲ್ಲಿ ದಶಕಗಳಿಂದ ವೈದ್ಯರಾಗಿ ಜನಾನುರಾಗಿಗಳಾಗಿರುವ ಡಾ.ಸರ್ವೇಶ್ವರ ಭಟ್ ಕಳೆದ ಕೆಲವು ವಾರಗಳಿಂದ ವಯೋ ಸಹಜ ಕಾರಣ ಮನೆಯಲ್ಲಿ ವಿಶ್ರಾಂತಿಯಲ್ಲಿರುವರು. ಕುಂಬಳೆ ಪರಿಸರದಲ್ಲಿ ತೀವ್ರಗೊಳ್ಳುತ್ತಿರುವ ಕೋವಿಡ್ ಕಾರಣ ಹಿರಿಯ ಜೀವವಾದ ವೈದ್ಯರಲ್ಲಿ ಸಂಬಂಧಪಟ್ಟ ಸರ್ಕಾರಿ ಇಲಾಖೆ ಒಂದಷ್ಟು ಕಾಲ ಕ್ಲಿನಿಕ್ ಬಾರದಿರುವಂತೆ ವಿನಂತಿಸಿತ್ತು.
ಇದನ್ನೇ ಬಂಡವಾಳವಾಗಿಸಿದ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ಕ್ಲಿನಿಕ್ ಗೆ ಬಾರದಿರುವ ಬಗ್ಗೆ ಕಪೋಲಕಲ್ಪಿತ ಕಥೆಗಳನ್ನು ಹೆಣೆದು ಶನಿವಾರ ಜೀವಂತ ಕೊಲ್ಲುವ ಯತ್ನ ಮಾಡಿದ ಘಟನೆ ನಡೆದಿದ್ದು ವೈದ್ಯರ ಕುಟುಂಬ, ಸಂಬಂಧಿಕರಿಗೆ ತೀವ್ರ ಬೇಸರ ತರಿಸಿದೆ ಎಂದು ಸಮರಸ ಸುದ್ದಿಗೆ ತಿಳಿಸಿದ್ದಾರೆ.
ಸ್ವಗೃಹದಲ್ಲಿ ಆರೋಗ್ಯಪೂರ್ಣರಾಗಿ ಕ್ಷೇಮವಾಗಿರುವ ಡಾ.ಸರ್ವೇಶ್ವರ ಭಟ್ ಸರ್ಕಾರದ ಅನುಮತಿ ಲಭ್ಯವಾದಲ್ಲಿ ಮುಂದಿನ ದಿನಗಳಲ್ಲಿ ವೈದ್ಯಸೇವೆಗೆ ಹಾಜರಾಗುವರೆಂದೂ ಕುಟುಂಬ ಮೂಲಗಳು ತಿಳಿಸಿವೆ.
ಇದೇ ಮೊದಲಲ್ಲ:
ಕೆಲವು ವಾರಗಳ ಹಿಂದೆ ತೆಂಕುತಿಟ್ಟಿನ ಖ್ಯಾತ ಭಾಗವತರೊಬ್ಬರನ್ನೂ ಇಂತಹದೇ ಅಪ್ರಬುದ್ದ ಸಂದೇಶಗಳ ಮೂಲಕ ಅವಮಾನಿಸಿರುವುದು ಬೆಳಕಿಗೆ ಬಂದಿತ್ತು. ಚಿಕಿತ್ಸೆ ನೀಡುವ ವೈದ್ಯರ, ಸಂಬಂಧಿಕರ ಅನುಮತಿ ಇಲ್ಲದೆ ಯಾವನೇ ವ್ಯಕ್ತಿಯ ಬಗ್ಗೆ ಯಾವುದೇ ಸುದ್ದಿಗಳನ್ನು ಅಸಮಂಜಸವಾಗಿ ಪ್ರಕಟಿಸಿ ಲೈಕ್ ಪಡೆಯುವ, ತಾನೇ ಮೊದಲಿಗನಾಗಬೇಕೆಂಬ ಹಪಹಪಿಯ ಮನಸ್ಸುಗಳನ್ನು ಸಮಾಜ ಮುಂದಿನ ದಿನಗಳಲ್ಲಿ ಏನು ಮಾಡೀತೆಂಬುದನ್ನು ಕಾದು ನೋಡಬೇಕಿದೆ.
good
ReplyDelete