ಚೆನ್ನೈ: ತಮಿಳುನಾಡಿನ ಕಲಕುರಿಚಿಯ ಎಐಎಡಿಎಂಕೆ ಶಾಸಕ ಪ್ರಭು, ಸೌಂದರ್ಯ ಎಂಬ 19 ವರ್ಷದ ಯುವತಿಯನ್ನು ವಿವಾಹವಾಗಿರುವ ಸುದ್ದಿಯು ಸೋಮವಾರ ಬೆಳಗ್ಗೆ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದೊಂದು ಅಂತರ್ಜಾತಿ ವಿವಾಹವಾಗಿದ್ದು, ಯುವತಿಯ ತಂದೆ ಮದುವೆ ದಿನವೇ ವಧು-ವರರ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಲು ಕಾರಣವಾಗಿದೆ. ಇದೀಗ ಪರ-ವಿರೋಧಗಳ ಚರ್ಚೆಯ ಮೂಲಕ ಭಾರಿ ವಿವಾದವನ್ನೇ ಹುಟ್ಟುಹಾಕಿದೆ.
ಅಕ್ಟೋಬರ್ 5ರಂದು ವಿವಾಹ ನೆರವೇರಿದೆ. ಅಂದಹಾಗೆ ಸೌಂದರ್ಯ ಮೇಲ್ಜಾತಿಯ ಕುಟುಂಬದವಳಾಗಿದ್ದು, ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ. ಪ್ರಭು ದಲಿತ ಕುಟುಂಬದವರಾಗಿದ್ದು, ಬಿಟೆಕ್ ಪದವೀಧರರಾಗಿದ್ದಾರೆ. ಸೋಮವಾರ ಬೆಳಗ್ಗೆ ಸೌಂದರ್ಯ ತಂದೆ ಸ್ವಾಮಿನಾಥನ್ ಮದುವೆ ನಡೆಯುತ್ತಿದ್ದ ಪ್ರಭು ಅವರ ಮನೆಗೆ ಬಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಅಲ್ಲದೆ, ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಲಕುರಿಚಿ ಶಾಸಕ ಪ್ರಭು ನಯವಾದ ಮಾತುಗಳಿಂದ ನನ್ನ ಮಗಳನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಕ್ಟೋಬರ್ 1ರ ಸಂಜೆ 4ರ ಸಮಯದಲ್ಲಿ ಮಗಳನ್ನು ಅಪಹರಿಸಿದ್ದಾನೆಂದು ಸೌಂದರ್ಯ ತಂದೆ ಆರೋಪಿಸಿದ್ದಾರೆ. 15 ವರ್ಷಗಳಿಂದ ನಮ್ಮ ಕುಟುಂಬದೊಂದಿಗೆ ಪ್ರಭು ಸ್ನೇಹ ಸಂಬಂಧ ಹೊಂದಿದ್ದು, ಕಳೆದ ನಾಲ್ಕ ವರ್ಷಗಳಿಂದ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆವಾಗ ನನ್ನ ಮಗಳಿನ್ನೂ ಅಪ್ರಾಪ್ತೆಯಾಗಿದ್ದಳು. ನನಗೆ ಜಾತಿಯ ಸಮಸ್ಯೆ ಇಲ್ಲ. ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚಿರುವುದೇ ಸಮಸ್ಯೆಯೆಂದು ಮಾಧ್ಯಮಗಳು ಎದುರು ಹೇಳಿದ್ದಾರೆ.
ಆರೋಪಗಳ ಬೆನ್ನಲ್ಲೇ ಶಾಸಕ ಪ್ರಭು, ಸೌಂದರ್ಯ ಜತೆಗಿನ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ನಾನು ಸೌಂದರ್ಯಳನ್ನು ಅಪಹರಿಸಿ ಮತ್ತು ಬೆದರಿಸಿ, ಬಲವಂತವಾಗಿ ಮದುವೆಯಾಗಿದ್ದೇನೆಂದು ಕೆಲ ವದಂತಿಗಳು ಹರಿದಾಡುತ್ತಿವೆ. ಇದ್ಯಾವುದು ಕೂಡ ನಡೆದಿಲ್ಲ. ಪರಸ್ಪರ ಪ್ರೀತಿಸಿ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದೇವೆ ಎಂದು ಪ್ರಭು ಹೇಳಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಇಬ್ಬರು ಪ್ರೀತಿಸುತ್ತಿದ್ದೆವು. ಮದುವೆ ಮಾಡಿಕೊಳ್ಳಲು ಸೌಂದರ್ಯ ಪಾಲಕರ ಅನುಮತಿಯನ್ನು ಕೇಳಿದೆವು. ಆದರೆ, ಅವರು ಒಪ್ಪಲಿಲ್ಲ. ಬಳಿಕ ನಮ್ಮ ಕುಟುಂಬದ ಒಪ್ಪಿಗೆ ಮೇರೆಗೆ ಇಬ್ಬರು ಮದುವೆಯಾದೆವು. ನಾನು ಆಕೆಯನ್ನು ಬೆದರಿಸುವುದಾಗಲಿ ಅಥವಾ ಆಮಿಷ ಒಡ್ಡುವುದಾಗಲಿ ಮಾಡಿಲ್ಲ. ನಾವು ಪ್ರೀತಿಸುತ್ತಿದ್ದೆವು. ಇದೀಗ ಮದುವೆಯಾಗಿದ್ದೇವೆ ಎಂದಿದ್ದಾರೆ. ವಿಡಿಯೋದಲ್ಲಿ ಪಕ್ಕದಲ್ಲೇ ಕುಳಿತಿದ್ದ ಸೌಂದರ್ಯ ಯಾವುದೇ ಮಾತನಾಡಿಲ್ಲ.
ಇದೀಗ ಮದುವೆ ಸಮಾರಂಭ ಸ್ಥಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸೌಂದರ್ಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 309ರ ಅಡಿಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣದಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.