ತಿರುವನಂತಪುರ: ಐದನೇ ಹಂತದ ಅನ್ ಲಾಕ್ ನ ಈ ಸಂದರ್ಭ ಅಕ್ಟೋಬರ್ 15 ರಿಂದ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಶಾಲೆಗಳು ಕಾರ್ಯನಿರ್ವಹಿಸಬೇಕೆಂದು ರಾಜ್ಯ ಬಯಸಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಶಾಲೆಗಳನ್ನು ಸದ್ಯಕ್ಕೆ ತೆರೆಯಲಾಗುವುದಿಲ್ಲ. ಕೋವಿಡ್ ಹರಡುವಿಕೆಯ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಸಾಧುವಲ್ಲ. ಸೋಂಕು ಹರಡುವಿಕೆ ಕಡಿತಗೊಳಿಸಲು ಪ್ರಸ್ತುತ ಸರ್ಕಾರ ಧಾವಂತದಲ್ಲಿದೆ ಸಿಎಂ ಹೇಳಿದರು.
ಅನ್ ಲಾಕ್ ಐದನೇ ಹಂತಕ್ಕೆ ಸಂಬಂಧಿಸಿದ ವಿನಾಯಿತಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಬಯಸಿದೆ. ಸಂಪೂರ್ಣ ಲಾಕ್ ಡೌನ್ ಹೇರಲು ಸರ್ಕಾರ ಚಿಂತಿಸಿಲ್ಲ. ಹೆಚ್ಚಿನ ವಿನಾಯ್ತಿಗಳನ್ನು ಮಾಡಲು ಸರ್ಕಾರ ಬಯಸುತ್ತಿದೆ. ಆದರೆ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವುದರಿಂದ ಅತೀವ ಜಾಗ್ರತೆಯಿಂದ ಮುಂದುವರಿಯುವ ಅವಶ್ಯಕತೆಯಿದೆ. ಆದ್ದರಿಂದ ಅನ್ಲಾಕ್ ಐದನೇ ಹಂತದಲ್ಲಿ ವಿನಾಯಿತಿಗಳನ್ನು ಪೂರ್ಣವಾಗಿ ಅನುಮತಿಸಲಾಗುವುದಿಲ್ಲ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ, ಜನರು ಅಗತ್ಯಗಳಿಗಾಗಿ ಮಾತ್ರ ಹೊರಗೆ ಹೋಗಬೇಕು. ನಿಗದಿಯಾದ ಪರೀಕ್ಷೆಗಳನ್ನು ನಡೆಸಲು ಯಾವುದೇ ನಿಷೇಧ ಹೇರುವುದಿಲ್ಲ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿರುವ ಕೈಗಾರಿಕಾ ಕಾರ್ಖಾನೆಗಳು ಮತ್ತು ಇತರ ಉತ್ಪಾದನಾ ಘಟಕಗಳು ಪೂರ್ಣ ಪ್ರಮಾಣದ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಬಹುದು. ಕೋವಿಡ್ ಮಾನದಂಡಗಳು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಖಾಸಗಿ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಸುರಕ್ಷತಾ ನಿಯಮಗಳಿಗೆ ಅನುಸಾರ ಕಾರ್ಯನಿರ್ವಹಿಸಬಹುದು. ರೋಗಿಗಳು ಗುಂಪುಗಳಾಗಿ ನಿಲ್ಲಬಾರದು. ಈ ಮಾರ್ಗಸೂಚಿಗಳು ಸಾಮಾನ್ಯ ಚಿಕಿತ್ಸೆಯ ಕೇಂದ್ರಗಳು, ದಂತ ಕೇಂದ್ರಗಳು, ಹೋಮಿಯೋಪತಿ ಮತ್ತು ಆಯುರ್ವೇದ ಕೇಂದ್ರಗಳಿಗೆ ಅನ್ವಯಿಸುತ್ತವೆ. ಅಂಗಡಿಗಳಿಗೆ ಟೋಕನ್ ವ್ಯವಸ್ಥೆ ಏರ್ಪಡಿಸುವುದು ಹೆಚ್ಚು ಪ್ರಯೋಜನಕಾರಿಯಾಗುವುದು. ದೈಹಿಕ ಅಂತರವನ್ನು ಕಾಯ್ದುಕೊಂಡು 5 ಕ್ಕೂ ಹೆಚ್ಚು ಜನರನ್ನು ಅಂಗಡಿಗಳ ಒಳಗೆ ಸೇರಿಸಿಕೊಳ್ಳಬಹುದು ಎಂದು ಸಿಎಂ ಹೇಳಿದರು. ಇಂದಿನ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿಗಳನ್ನು ಹಂಚಿಕೊಂಡರು.