ಮಂಜೇಶ್ವರ: ಕುಂಬಳೆ, ಮುಗು, ಪುತ್ತಿಗೆ, ಪೈವಳಿಕೆ, ಬದಿಯಡ್ಕ, ಮೀಂಜ, ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಭತ್ತದ ಕೃಷಿ ಸಂಪೂರ್ಣ ನಾಶವಾಗಿದೆ. ಹಲವು ದಿನಗಳಷ್ಟು ಕಾಲ ಗದ್ದೆಗಳಲ್ಲಿ ನೀರು ನಿಂತ ಪರಿಣಾಮವಾಗಿ ಬಲಿತ ಭತ್ತದ ತೆನೆ ಪೂರ್ಣವಾಗಿ ಮೊಳಕೆ ಬಂದು ನಾಶವಾಗಿರುತ್ತದೆ. ಈ ರೀತಿ ನಾಶ ನಷ್ಟವಾದುದರಿಂದ ಕಾಸರಗೋಡು ಜಿಲ್ಲಾ ಕೃಷಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ರೈತರಿಗೆ ಅಗತ್ಯ ನೆರವು ನೀಡುವಂತೆ ಭಾರತೀಯ ಕಿಸಾನ್ ಸಂಘ ಆಗ್ರಹಿಸಿದೆ.
ಕಿಸಾನ್ ಸಂಘದ ಕೇರಳ ರಾಜ್ಯ ಉಪಾಧ್ಯಕ್ಷ ರಾಮ ಮಾಸ್ತರ್ ಕಳತ್ತೂರು, ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ವಿನೋದ್, ಜಿಲ್ಲಾ ಕಾರ್ಯದರ್ಶಿ ಸದಾನಂದ ಕೊಮ್ಮಂಡ ಬಾಲಕೃಷ್ಣ ಕೋಡಿ, ಜಗನ್ನಾಥ ಮಾಸ್ತರ್ ಮೊದಲಾದವರು ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವಂತೆ ವಿನಂತಿಸಿದೆ.
ಭತ್ತ, ಅಡಿಕೆ ಕೃಷಿಕರು ಸಂಕಷ್ಟದಲ್ಲಿರುವುದರಿಂದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಿಪಿಎಲ್ ಎಪಿಎಲ್ ಕಾರ್ಡುದಾರರಿಗೆ ಸಹಾಯ ಹಾಗೂ ಉದ್ಯೋಗಾವಕಾಶವನ್ನು ನೀಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ಕಿಸಾನ್ ಸಂಘ ಮನವಿ ಮಾಡಿದೆ.