ಕೊಚ್ಚಿ: ಕೇರಳ ಚಿನ್ನ ಕಳ್ಳಸಾಗಣೆ ಕೇಸ್ನ ಪ್ರಮುಖ ಆರೋಪಿಗಳಾದ ಫೈಸಲ್ ಫರೀದ್ ಮತ್ತು ರಾಬಿನ್ಸ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಕೊಚ್ಚಿ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ. ಯುಎಇ ಆಡಳಿತ ಅಧಿಕೃತವಾಗಿಯೇ ಫೈಸಲ್ ಫರೀದ್ನ ಬಂಧನವನ್ನು ಖಾತ್ರಿಗೊಳಿಸಿದೆ ಎಂದು ಎನ್ಐಎ ಹೇಳಿದೆ.
ಕಳ್ಳಸಾಗಣೆ ಕೇಸ್ನ ಇಬ್ಬರು ಪ್ರಮುಖ ಪಿತೂರಿಗಾರರು ಇವರೆಂಬುದನ್ನು ಎನ್ಐಎ ಪ್ರತಿಪಾದಿಸಿದೆ. ಫೈಸಲ್ ಫರೀದ್, ರಾಬಿನ್ಸ್ ಹಮೀದ್, ಸಿದ್ದಿಕ್ ಅಕ್ಬರ್, ಅಹ್ಮದ್ ಕುಟ್ಟಿ, ರತೀಶ್, ಮೊಹಮ್ಮದ್ ಶಮೀರ್ ಎಂಬ ಆರು ಆರೋಪಿಗಳ ವಿರುದ್ಧ ಇಂಟರ್ ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಚಿನ್ನಕಳ್ಳಸಾಗಣೆ ಕೇಸ್ನಲ್ಲಿ ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಎನ್ಐಎ ಸಲ್ಲಿಸಿದ ಅಫಿಡವಿಟ್ನಲ್ಲಿ ಈ ವಿವರಗಳಿವೆ. ಮೊಹಮ್ಮದ್ ಶಫಿ ಮತ್ತು ಕೆ.ಟಿ.ರಮೀಸ್ ಎಂಬಿಬ್ಬರು ಈ ಚಿನ್ನ ಕಳ್ಳಸಾಗಣೆ ಕೇಸ್ನ ಮಾಸ್ಟರ್ಮೈಂಡ್ಗಳು ಎಂದು ಹೇಳಿರುವ ಎನ್ಐಎಗೆ ಕೋರ್ಟ್ ಆರೋಪಿಗಳ ವಿರುದ್ಧದ ಸಾಕ್ಷ್ಯ ಒದಗಿಸುವಂತೆ ನಿನ್ನೆ ತಾಕೀತು ಮಾಡಿತ್ತು. ಏತನ್ಮಧ್ಯೆ ಈ ಆರೋಪಿಗಳ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಕಸ್ಟಮ್ಸ್ ಕೇಸ್ನಲ್ಲಿ ಮೊನ್ನೆಯಷ್ಟೇ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ಗೆ ಜಾಮೀನು ಲಭ್ಯವಾಗಿದೆ. ಕೊಚ್ಚಿಯಲ್ಲಿರುವ ಆರ್ಥಿಕ ಅಪರಾಧ ನ್ಯಾಯಾಲಯ ಈ ಜಾಮೀನು ಮಂಜೂರು ಮಾಡಿದೆ. ಕಸ್ಟಮ್ಸ್ ಇಲಾಖೆ 60 ದಿನದೊಳಗೆ ಆರೋಪ ಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಆಕೆಗೆ ಜಾಮೀನು ಮಂಜೂರಾಗಿತ್ತು.