ಉಪ್ಪಳ: ಶ್ರೀಮದ್ ಎಡನೀರು ಮಠದ ನಿಯೋಜಿತ ಪೀಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಭಾನುವಾರ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಕ್ಷೇತ್ರದರ್ಶನಗೈದರು.
ಈ ಸಂದರ್ಭ ಭಕ್ತಾದಿಗಳು ಚೆಂಡೆ ಜಾಗಟೆಗಳೊಡನೆ ಅವರನ್ನು ಬರಮಾಡಿಕೊಂಡರು. ಕ್ಷೇತ್ರ ದರ್ಶನ ಮಾಡಿ, ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರೊಡನೆ ವೇದಿಕೆಗೆ ಆಗಮಿಸಿದ ಸಚ್ಚಿದಾನಂದ ಶ್ರೀಗಳು ಯೋಗಾನಂದ ಶ್ರೀಗಳವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರುರವರು ಸಚ್ಚಿದಾನಂದ ಶ್ರೀಗಳ ಪರಿಚಯವನ್ನು ಸಭೆಗೆ ಮಾಡಿದರು. ಬಳಿಕ ಶ್ರೀಗಳವರು ಸಚ್ಚಿದಾನಂದ ಶ್ರೀಗಳಿಗೆ ಶಾಲು ಹೊದಿಸಿ ಹಾರ ತೊಡಿಸಿ ಗೌರವಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಆಶ್ರಮದ ವಿಶ್ವಸ್ಥ ಶಶಿಧರ ಶೆಟ್ಟಿ ಮುಟ್ಟ ಅವರು ಫಲಕಾಣಿಕೆ ಸಮರ್ಪಿಸಿದರು. ಬಳಿಕ ಶ್ರೀಗಳವರು ಎಡನೀರು ಮಠದ ಗೌರವವನ್ನು, ಕಷ್ಟಸಾಧ್ಯವಾದ ವೈದಿಕ ಕ್ರಮವನ್ನು ಮುಂದೆಯೂ ಎತ್ತಿ ಹಿಡಿಯುವಂತಾಗಲಿ. ಭಾರತವನ್ನು ಒಗ್ಗೂಡಿಸುವಲ್ಲಿ ಅನನ್ಯ ಕೊಡುಗೆ ನೀಡಿದ ಶಂಕರಾಚಾರ್ಯರ ಪರಂಪರೆಯ ಮಠ ಹಿಂದುತ್ವದ ರಕ್ಷಣೆಯನ್ನು ಇನ್ನೂ ಹೆಚ್ಚು ಮಾಡುವಂತಾಗಲಿ, ಸಮಾಜ ಶುದ್ಧಿಗೊಳಿಸುವ ಸಂನ್ಯಾಸಿಗಳ ಮಹಾನ್ ಕಾರ್ಯದಲ್ಲಿ ನಿಮ್ಮ ಜೊತೆ ನಾವೂ ಕೈಜೋಡಿಸುತ್ತೇವೆ ಎಂದು ಹಾರೈಸಿದರು.
ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ಶಾಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಸ್ವಾಗತಿಸಿದರು. ಸದಾಶಿವ ಮೋಂತಿಮಾರು ನಿರೂಪಿಸಿದರು. ಎಡನೀರು ಮಠದ ಪ್ರಮುಖ ಕಾರ್ಯಕರ್ತರು, ಆಶ್ರಮದ ಭಕ್ತಾದಿಗಳು ಉಪಸ್ಥಿತರಿದ್ದರು.