ಮಂಜೇಶ್ವರ : ಗಡಿನಾಡಿನ ಹೆಮ್ಮೆಯ ಯಕ್ಷಗಾನ ಸಂಘಟನೆ "ಯಕ್ಷಬಳಗ ಹೊಸಂಗಡಿ" ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಹಿರಿಯರ ನೆನಪು ಕಾರ್ಯಕ್ರಮ ಇತ್ತೀಚೆಗೆ ಮೂಡಂಬೈಲು ನಾಗರಾಜ ಪದಕಣ್ಣಾಯ ಅವರ ಮನೆಯಲ್ಲಿ ಜರಗಿತು.
ಯಕ್ಷಗಾನ ರಂಗದಲ್ಲಿ ಅಪ್ರತಿಮ ಕಲಾವಿದನೆಂದೇ ನೆಗಳ್ತೆಗೆ ಪಾತ್ರರಾಗಿದ್ದ ದಿವಂಗತ ಹೊಸಹಿತ್ಲು ಮಹಾಲಿಂಗ ಭಟ್ ಅವರ ಬದುಕು ಹಾಗೂ ಕಲಾಸೇವೆಯನ್ನು ನೆನಪಿಸಿಕೊಳ್ಳಲಾಯಿತು.
ಸಮಾರಂಭವನ್ನು ಮಂಗಳೂರಿನ ಖ್ಯಾತ ನ್ಯಾಯವಾದಿ ಜಯರಾಮ ಪದಕಣ್ಣಾಯ ದೀಪಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ಏಕೀಕರಣ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳುಕ್ಕುರಾಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ಮಹಾಲಿಂಗ ಭಟ್ಟರನ್ನು ನಿಕಟವಾಗಿ ಬಲ್ಲ ರಾಜಾರಾಮ ರಾವ್ ಮೀಯಪದವು ನುಡಿನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ರೂಢಿಯಲ್ಲಿ ಲಿಂಗಣ್ಣನೆಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಹೊಸಹಿತ್ಲು ಮಹಾಲಿಂಗ ಭಟ್ಟರು ಯಕ್ಷಗಾನ ರಂಗಕ್ಕೆ ನೀಡಿದ ಕೊಡುಗೆ ಅಪಾರವಾದುದು. ಪುಂಡು ವೇಷ, ಕಿರೀಟ ವೇಷಗಳಲ್ಲಿ ಸದಾ ವಿಜೃಂಬಿಸುತ್ತಿದ್ದವರು, ಪ್ರಸಂಗ ಕರ್ತರಾಗಿಯೂ ಶ್ರೀಯುತರು ಪ್ರಸಿದ್ದರಾಗಿದ್ದರು. ಅವರ ಅಭಿಮನ್ಯು, ಬಬ್ರುವಾಹನ, ಅತಿಕಾಯ, ಇಂದ್ರಜಿತು, ಗದಾಯುದ್ಧದ ಕೌರವ, ಮೇಘವರ್ಣ, ಬಾಲ ಮಹಿಷ , ಪರಶುರಾಮ ಪಾತ್ರಗಳು ದಾಖಲಾರ್ಹವಾದುದು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರುಗಳಾದ ರಾಧಾಕೃಷ್ಣ ಕಲ್ಚಾರ್, ಯೋಗೀಶ ರಾವ್ ಚಿಗುರುಪಾದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಬಳಗದ ಹಿರಿಯ ಸದಸ್ಯ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ಯಕ್ಷಬಳಗದ ಸಂಚಾಲಕ ಸತೀಶ ಅಡಪ ಸಂಕಬೈಲು ಸ್ವಾಗತಿಸಿ, ನಾಗರಾಜ ಪದಕಣ್ಣಾಯ ನಿರೂಪಿಸಿ ನ್ಯಾಯವಾದಿ ವಿಠಲ ಭಟ್ ಮೊಗಸಾಲೆ ವಂದಿಸಿದರು.
ಬಳಿಕ ಯಕ್ಷಬಳಗ ಹೊಸಂಗಡಿ ಹಾಗೂ ಅತಿಥಿ ಕಲಾವಿದರಿಂದ "ಕರ್ಮಬಂಧ" ಯಕ್ಷಗಾನ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭಾಗವತರು ರತ್ನಾಕರ ಆಳ್ವ ತಲಪಾಡಿ, ಚೆಂಡೆಮದ್ದಳೆಗಳಲ್ಲಿ ರಾಜಾರಾಮ ಬಲ್ಲಾಳ ಚಿಪ್ಪಾರು, ಹರೀಶ್ಚಂದ್ರ ನಾಯ್ಗ ಮಾಡೂರು, ಕೀರ್ತನ್ ನಾಯ್ಗ ಮಾಡೂರು ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್(ಭೀಷ್ಮ), ಸದಾಶಿವ ಆಳ್ವ ತಲಪಾಡಿ(ಶ್ರೀಕೃಷ್ಣ), ಸತೀಶ ಅಡಪ ಸಂಕಬೈಲು(ಅಭಿಮನ್ಯು), ನಾಗರಾಜ ಪದಕಣ್ಣಾಯ ಮೂಡಂಬೈಲು(ಅರ್ಜುನ) ಪಾತ್ರವಹಿಸಿದ್ದರು. ಈ ಸಂದರ್ಭ ಯಕ್ಷಬಳಗ ತಂಡದ ಕಾರ್ಯಕ್ರಮಗಳಲ್ಲಿ ಸುದೀರ್ಘಕಾಲದಿಂದ ಭಾಗವಹಿಸುತ್ತಿದ್ದ ರಾಧಾಕೃಷ್ಣ ಕಲ್ಚಾರ್ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.