ನವದೆಹಲಿ: ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಇಂದು (ಏಪ್ರಿಲ್ 17) ಸಭೆ ನಡೆಸುವುದಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಅವರು, "ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಶನಿವಾರ ಸಭೆ ನಡೆಸಲಿದ್ದೇನೆ. ಸೋಮವಾರ ಎಲ್ಲಾ ಏಮ್ಸ್ ಆಸ್ಪತ್ರೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ದೇಶದಲ್ಲಿನ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.
ದೇಶದಲ್ಲಿನ ಕೊರೊನಾ ಸ್ಥಿತಿಗತಿ ಹಾಗೂ ಆರೋಗ್ಯ ಸೇವೆ, ಆರೋಗ್ಯ ಕ್ಷೇತ್ರದಲ್ಲಿನ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಲಾಗುವುದು. ಎಲ್ಲಾ ಕಡೆ ಆರೋಗ್ಯ ಸೌಲಭ್ಯಕ್ಕೆ ಅಗತ್ಯ ಸಾಧನಗಳನ್ನು ಹೆಚ್ಚಿಸುವ ಆಲೋಚನೆ ಇದೆ ಎಂದು ತಿಳಿಸಿದರು. ವೈದ್ಯಕೀಯ ಆಮ್ಲಜನಕ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಅಭಾವದ ಕುರಿತು ಚರ್ಚೆ ನಡೆಸಲಿರುವುದಾಗಿ ತಿಳಿದುಬಂದಿದೆ.
ಕೊರೊನಾ ನೀಡಿರುವ ಈ ಸವಾಲನ್ನು ಮೆಟ್ಟಿ ಇದರಿಂದ ಹೊರಗೆ ಬರುವ ಭರವಸೆಯಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದು, ರೆಮ್ಡಿಸಿವಿರ್ ಔಷಧವನ್ನು ತಯಾರಿಸುತ್ತಿರುವ ಕಂಪನಿಗಳಿಗೆ ಉತ್ಪಾದನೆ ಹೆಚ್ಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.