ಮಂಜೇಶ್ವರ : ಹಿಂದೂ ಮುಸ್ಲಿಂ ಬಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ನಡೆದುಬರುತ್ತಿರುವ ಉದ್ಯಾವರ ಶ್ರೀ ಅರಸು ದೈವಗಳು ವಷರ್ಂಪ್ರತಿಯ ವಾಡಿಕೆಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗು ಸಹಸ್ರಾರು ಹಿಂದೂ ಬಾಂಧವರು ಜೊತೆಯಾಗಿ ಉದ್ಯಾವರ ಸಾವಿರ ಜಮಾಅತ್ ಮಸೀದಿಗೆ ಭೇಟಿ ನೀಡಿದರು.
ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಲುವಾಗಿ ಪ್ರಾಚೀನ ಕಾಲದಿಂದಲೇ ನಡೆದು ಬರುತ್ತಿರುವ ಅರಸು ದೈವಗಳ ಜಮಾಅತ್ ಭೇಟಿ ಇಂದಿಗೂ ಹಿಂದೂ ಮುಸ್ಲಿಂ ಬಾವೈಕ್ಯತೆಗೊಂದು ಪ್ರತೀಕವಾಗಿದೆ. ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ನಡೆಯುತ್ತದೆ. ಇದರಂತೆ ಶುಕ್ರವಾರ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.40 ರಹೊತ್ತಿಗೆ ಜಮಾಅತ್ ಗೆ ತಲುಪಿದವು .ಈ ವೇಳೆ ಜುಮಾ ನಮಾಝ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿಯ ಪ್ರತಿನಿಧಿಗಳು ಹಾಗು ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿಯ ಸ್ವಾಗತ ನೀಡಿದರು.ದೈವ ಪಾತ್ರಿಗಳು ಜಮಾಅತಿನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾಅತಿನ ಸರ್ವ ಮುಸ್ಲಿಂ ಬಾಂಧವರನ್ನು ಕೂಡ ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಆಹ್ವಾನವಿತ್ತಿತು.ಮೇ 8 ರಿಂದ 11 ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಅತಿನ ವ್ಯಾಪ್ತಿಯಲ್ಲಿರುವ ಎಲ್ಲಾ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವುದು ಇಲ್ಲಿಯ ವಿಶೇಷತೆಯಾಗಿದೆ. ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುವ ನೇಮೋತ್ಸವ ದಿನದಂದು ಜಮಾಅತಿನ ಅಧಿಕೃತರು ಕುಳ್ಳಿರಲು ದೈವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ನೀಡಲಾಗುತ್ತದೆ. ಮಾತ್ರವಲ್ಲದೆ ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಕೂಡಾ ಜಮಾಅತಿನವರಿಗೆ ನೀಡಲಾಗುತ್ತದೆ. ಕಾರಣಿಕ ಪ್ರಸಿದ್ದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಬೇಧಭಾವವಿಲ್ಲದೆ ಹಿಂದೂ ಮುಸಲ್ಮಾನರು ಪಾಲ್ಗೊಳ್ಳುದು ಇಲ್ಲಿಯ ವಿಶೇಷತೆಯಾಗಿದೆ.
ಜಮಾಅತ್ ಭೇಟಿಗೆ ಉದ್ಯಾವರ ಸಾವಿರ ಜಮಾಅತ್ ನಲ್ಲಿ ಹನೀಫ್ ಪಿ ಎ, ಟಿ ಎಸ್ ಸಯ್ಯದ್, ಆಸಿಫ್, ಪೆÇಡಿಯ ಮೊದಲಾದವರ ನೇತೃತ್ವದಲ್ಲಿ ಬರ ಮಾಡಿಕೊಳ್ಳಲಾಯಿತು. ಉದ್ಯಾವರ ಶ್ರೀ ಅರಸು ದೈವಗಳ ಮುಖ್ಯಸ್ಥರಾದ ದಯಾಕರ ಮಾಡ, ದುಗ್ಗ ಭಂಡಾರಿ, ನಾರಾಯಣ ಗುರಿಕ್ಕಾರ, ಪದ್ಮ ಗುರಿಕ್ಕಾರ ಸಂಜೀವ ಶೆಟ್ಟಿ, ಹರೀಶ್ ಶೆಟ್ಟಿ ಮಾಡ, ಹಾಗೂ ಎರಡು ವರ್ಣ ನಾಲ್ಕು ಗ್ರಾಮದವರು ಸೇರಿದಂತೆ ಹಲವರು ಜಮಾಅತ್ ಭೇಟಿಯಲ್ಲಿ ಉಪಸ್ಥಿತರಿದ್ದರು.