ಮುಳ್ಳೇರಿಯ: ಜನ ಸೇವೆಯೇ ಜನಾರ್ಧನ ಸೇವೆ ಎಂಬುದನ್ನು ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಎಂ. ಸಾಬೀತು ಪಡಿಸಿದ್ದಾರೆ. ಬೆಳ್ಳೂರು ಪಂಚಾಯಿತಿಯ ಜನರು ಬೇಸಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾ.ಪಂ.ವ್ಯಾಪ್ತಿಯಲ್ಲಿ ಜಲನಿಧಿ ಯೋಜನೆ ಕಾಮಗಾರಿ ಆರಂಭಿಸಿ ಬರೋಬ್ಬರಿ 7 ವರ್ಷ ಕಳೆದಿದೆ.2019ರಲ್ಲಿ ಲೋಕಸಭೆ ಚುನಾವಣೆ ಬಳಿಕ ಉದ್ಘಾಟನೆ ನಡೆಸಲು ಉದ್ದೇಶಿಸಲಾದ ಬೃಹತ್ ಯೋಜನೆಯ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಪಂಚಾಯಿತಿಯ 13 ವಾರ್ಡ್ ಗಳ 1,200ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರು ಒದಗಿಸುವ ಜಲನಿಧಿ ಯೋಜನೆ ಇದಾಗಿದ್ದು ಶೀಘ್ರ ಕಾಮಗಾರಿ ಪೂರ್ತಿಗೊಳಿಸಿ ಎಲ್ಲಾ ಮನೆಗಳಿಗೂ ನೀರು ಸರಬರಾಜು ಗೊಳಿಸುವಂತೆ ಆಗ್ರಹಿಸಿ ಶ್ರೀಧರ ಎಂ. ಹಲವು ಬಾರಿ ಜಲನಿಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಪದೇ ಪದೇ ಕಣ್ಣೂರಿನ ಕೆ.ಆರ್.ಡಬ್ಲ್ಯೂ.ಎಸ್.ಎಸ್. ಎ.ಕಚೇರಿ ಮೆಟ್ಟಿಲೇರಿದ್ದರು. ಯೋಗ್ಯ ರೀತಿಯ ಸ್ಪಂದನೆ, ಕಾಮಕಾರಿ ಪುನರಾರಂಭದ ಭರವಸೆ ಸಿಗದೆ ನಿರಾಶರಾಗಿ, ಬೇರೆ ದಾರಿಯಿಲ್ಲದೆ ಜಲನಿಧಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಯುನಿಟ್ ಕಣ್ಣೂರು ಜಲನಿಧಿ ಕಚೇರಿಗೆ ಸೋಮವಾರ ಬೆಳ್ಳಂಬೆಳಗ್ಗೆ ತೆರಳಿದ ಶ್ರೀಧರ ಎಂ. ಅಲ್ಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಮನಸೋತ ಅಧಿಕಾರಿಗಳು ಸಂಜೆ ವೇಳೆ ಕಾಮಗಾರಿ ಪುನರಾರಂಭಿಸುವ ಲಿಖಿತ ಭರವಸೆ ನೀಡಿದ್ದಾರೆ.ಸಂಜೆ ಅಲ್ಲಿಂದ ಹೊರಟ ಶ್ರೀಧರ ಎಂ.ರಾತ್ರಿ 12ಕ್ಕೆ ಮನೆ ತಲಪಿದ್ದಾರೆ. ಮಂಗಳವಾರ ಬೆಳ್ಳಂ ಬೆಳಗ್ಗೆ ಬೆಳ್ಳೂರು ತಲಪಿದ ಜಲನಿಧಿ ಯೋಜನೆ ಕಾರ್ಮಿಕರು ಲೋಪದೋಷಗಳ ಪರಿಶೀಲನೆ ನಡೆಸಿದ್ದಾರೆ.
ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಳ್ಳೂರು ಗ್ರಾ.ಪಂ.ಗೆ 2012ರಲ್ಲಿ ವಲ್ರ್ಡ್ ಬ್ಯಾಂಕ್ 6.5 ಕೋಟಿ ಮಂಜೂರುಗೊಳಿಸಿತ್ತು. 2013ರಲ್ಲಿ ಕಾಮಗಾರಿ ಆರಂಭಿಸಲಾದರೂ ಗುಡ್ಡ ಗಾಡು ಪ್ರದೇಶವಾದ ಕಾರಣ ಮೊತ್ತ ಸಾಕಾಗದೆ ಅಪೂರ್ಣಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ 11.65ಕೋಟಿ ರೂ.ಗಳಿಗೆ ಎಸ್ಟಿಮೇಟ್ ಪುನರ್ ಪರಿಷ್ಕರಿಸಿ 2017ರಲ್ಲಿ ಕಾಮಗಾರಿ ಪೂರ್ತಿಗೊಳಿಸುವಂತೆ ಸೂಚಿಸಲಾಗಿತ್ತು.
ಆದರೆ 2017ರಲ್ಲೂ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 2 ವರ್ಷ ಅನುಮತಿಸಿ 2019ರ ಲೋಕಸಭೆ ಚುನಾವಣೆ ಬಳಿಕ ಜಲನಿಧಿ ಯೋಜನೆ ಉದ್ಘಾಟಿಸಲು ತೀರ್ಮಾನಿಸಲಾಗಿತ್ತು.ಇದೀಗ 32ಲಕ್ಷ ಹೊರತು ಪಡಿಸಿ ಉಳಿದ ಎಲ್ಲಾ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಯೋಜನೆಯ ಮರೆಯಲ್ಲಿ 7.50ಕೋಟಿ ರೂ.ಭ್ರಷ್ಟಾಚಾರ ನಡೆದಿದೆ ಎಂದು ಶ್ರೀಧರ ಎಂ. ಆರೋಪಿಸಿದ್ದಾರೆ.
ಆದೂರು ಕುಂಟಾರಿನ ತೂಗು ಸೇತುವೆ ಸಮೀಪ ಪಯಸ್ವಿನಿ ನದಿತೀರದಲ್ಲಿ ಕೆರೆ ನಿರ್ಮಿಸಿ ನೀರು ಸಂಗ್ರಹಿಸುವ ಯೋಜನೆ ಇರಿಸಲಾಗಿದ್ದರೂ ಸ್ಥಳೀಯ ಕೃಷಿಕರ ಅನುಕೂಲತೆ ಪರಿಗಣಿಸಿ 2 ಮೀ.ಎತ್ತರ ಹಾಗೂ 93 ಮೀ.ಉದ್ದದ ಬೃಹತ್ ಅಣೆಕಟ್ಟು ನಿರ್ಮಿಸಲಾಗಿದೆ.ಕುಂಟಾರಿನಲ್ಲಿ ಒಂದು ಲಕ್ಷ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ನೀರು ಪೂರೈಕೆ ಸಾಮಥ್ರ್ಯ ಪರೀಕ್ಷಿಸಲು ಅಣೆಕಟ್ಟಿನ ಬಳಿ ಏಳು ಮೀಟರ್ ಆಳದ ಕೆರೆ ನಿರ್ಮಿಸಲಾಗಿದೆ. 50 ಅಶ್ವ ಶಕ್ತಿ ಪಂಪ್ ಬಳಸಿ 4 ಕಿ.ಮೀ. ಪೈಪ್ ಮೂಲಕ ಸಂಗ್ರಹಿಸಲಾದ ನೀರನ್ನು ಬೆಳ್ಳೂರು ಪಂಚಾಯಿತಿಯ ಗಡಿ ಪ್ರದೇಶ ಮಿಂಚಿಪದವಿನಲ್ಲಿ ನಿರ್ಮಿಸಲಾದ 2 ಲಕ್ಷ ಲೀಟರ್ ಸಾಮಥ್ರ್ಯದ ಬೃಹತ್ ಟ್ಯಾಂಕ್ಗೆ ವರ್ಗಾಯಿಸಿ ಅಲ್ಲಿಂದ ಸುಮಾರು 1,200 ಮನೆಗಳಿಗೆ ವಿತರಣೆ ನಡೆಸುವ ಉದ್ದೇಶದಿಂದ ಸುಮಾರು 170 ಕಿ.ಮೀ. ಉದ್ದದ ಪೈಪ್ ಅಳವಡಿಸಲಾಗಿದೆ.ಎಲ್ಲಾ ಮನೆಗಳಿಗೂ ಪೈಪ್, ನೀರಿನ ಟೇಪು ಹಾಗೂ ಮೀಟರ್ ಅಳವಡಿಸಲಾಗಿದ್ದರೂ ಕಾಮಗಾರಿ ಪೂರ್ತೀಕರಣ, ಯೋಜನೆಯ ಉದ್ಘಾಟನೆ ಇನ್ನೂ ನಡೆದಿಲ್ಲ.
ಇದೇ ವೇಳೆ ಮುಳ್ಳೇರಿಯ ಕಿನ್ನಿಂಗಾರು ಸಹಿತ ಈ ಭಾಗದ ರಸ್ತೆ ನವೀಕರಣದ ವೇಳೆ ಹಲವೆಡೆ ಪೈಪ್ ಗಳು ಒಡೆದು ನಾಶವಾಗಿದೆ.ಕಳೆದ ವರ್ಷ ಪರೀಕ್ಷಣಾರ್ಥ ನೀರು ಪೂರೈಕೆ ನಡೆದಿತ್ತು.
ಅಭಿಮತ:
'ಪಂಚಾಯಿತಿಯ ಜನರು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.ಜಲನಿಧಿ ಯೋಜನೆ ಕಾಮಗಾರಿ ಆರಂಭಿಸಿ 7 ವರ್ಷ ಕಳೆದಿದೆ.32ಲಕ್ಷ ಹೊರತು ಪಡಿಸಿ ಉಳಿದ ಎಲ್ಲಾ ಮೊತ್ತವನ್ನು ಗುತ್ತಿಗೆದಾರರಿಗೆ ನೀಡಲಾಗಿದೆ.ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಜಲನಿಧಿ ಅಧಿಕಾರಿಗಳಲ್ಲಿ ಪದೇ ಪದೇ ಈ ಬಗ್ಗೆ ವಿನಂತಿಸಿ, ಮನವಿ ಸಲ್ಲಿಸಿದ್ದರೂ ಶೀಘ್ರ ಯೋಜನೆ ಪೂರ್ತಿಗೊಳಿಸುವ ಭರವಸೆ ನೀಡುವುದಲ್ಲದೆ ಕಾಮಗಾರಿ ಪೂರ್ತಿಗೊಳಿಸುವ ಯಾವುದೇ ಕ್ರಮ ಕೈಗೊಂಡಿಲ್ಲ.ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಮುಷ್ಕರ ಕೊನೆಗೊಳ್ಳಿಸಿದ್ದು ಮಂಗಳವಾರ ಜಲನಿಧಿ ಯೋಜನೆ ಕಾರ್ಮಿಕರು ಕಾಮಗಾರಿ ಪುನರಾರಂಭಿಸಿದ್ದಾರೆ'
-ಶ್ರೀಧರ ಎಂ.
ಬೆಳ್ಳೂರು ಗ್ರಾ.ಪಂ.ಅಧ್ಯಕ್ಷರು