ನವದೆಹಲಿ :ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಹೊಸ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಇಂದು ಬೆಳಿಗ್ಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್. ವಿ. ರಮಣ ಅವರು ಏಕಕಾಲದಲ್ಲಿ ಪ್ರಮಾಣವಚನ ಬೋಧಿಸಿದರು.
ದೇಶದ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಒಂಬತ್ತು ನ್ಯಾಯಾಧೀಶರು ಒಂದೇ ಬಾರಿ ಪ್ರಮಾಣವಚನ ಸ್ವೀಕರಿಸಿರುವುದು ಇದೇ ಮೊದಲು.
ಸಮಾರಂಭವು ನ್ಯಾಯಾಲಯದ ಹೆಚ್ಚುವರಿ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ನಡೆಯಿತು. ಸಾಂಪ್ರದಾಯಿಕವಾಗಿ ಇದನ್ನು ಮುಖ್ಯ ನ್ಯಾಯಾಧೀಶರ ನ್ಯಾಯಾಲಯದ ಕೋಣೆಯಲ್ಲಿ ನಿರ್ವಹಿಸಲಾಗುತ್ತದೆ.
ಒಂಬತ್ತು ಹೊಸ ನ್ಯಾಯಾಧೀಶರುಗಳಲ್ಲಿ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ (ಕರ್ನಾಟಕ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ), ನ್ಯಾಯಮೂರ್ತಿ ವಿಕ್ರಮ್ ನಾಥ್ (ಗುಜರಾತ್ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶರು), ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಮಹೇಶ್ವರಿ (ಸಿಕ್ಕಿಂ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ) ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿ ( ತೆಲಂಗಾಣ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ)ಅವರಿದ್ದಾರೆ.
ನ್ಯಾ.ಬಿ.ವಿ.ನಾಗರತ್ನ (ಈ ಹಿಂದೆ ಕರ್ನಾಟಕ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗಿದ್ದರು)ಕೂಡ ಪ್ರಮಾಣವಚನ ಸ್ವೀಕರಿಸಿದರು. ನ್ಯಾಯಮೂರ್ತಿ ನಾಗರತ್ನ ಅವರು ಸೆಪ್ಟೆಂಬರ್ 2027 ರಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ.
ಪ್ರಮಾಣ ವಚನ ಸ್ವೀಕರಿಸಿದ ಇತರ ಹೊಸ ನ್ಯಾಯಾಧೀಶರುಗಳೆಂದರೆ: ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ (ಕೇರಳ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರು), ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ (ಮಾಜಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು), ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ (ಗುಜರಾತ್ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರು) ಹಾಗೂ ನ್ಯಾಯಮೂರ್ತಿ ಪಿ.ಎಸ್.ನರಸಿಂಹ (ಹಿರಿಯ ವಕೀಲರು ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ )
ಈ ಒಂಬತ್ತು ನ್ಯಾಯಾಧೀಶರ ಸೇರ್ಪಡೆಯೊಂದಿಗೆ ಸುಪ್ರೀಂ ಕೋರ್ಟ್ನ ಬಲವು ಮುಖ್ಯ ನ್ಯಾಯಾಧೀಶರು ಸೇರಿದಂತೆ 33 ರಷ್ಟಿದೆ.