ಕೊಟ್ಟಾಯಂ: ಇಲ್ಲಿನ ಪ್ರಸಿದ್ಧ ಏಟ್ಟುಮಾನೂರು ಶಿವ ದೇವಾಲಯದಲ್ಲಿ ದೇವರಿಗೆ ಅಲಂಕರಿಸಿದ ಪವಿತ್ರ ರುದ್ರಾಕ್ಷ ಮಾಲೆಯ ಚಿನ್ನದ ಹೊದಿಕೆಯ ಮಣಿಗಳು ಕಾಣೆಯಾಗಿವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ಮುಖ್ಯ ಅರ್ಚಕ ಪದ್ಮನಾಭನ್ ಸಂತೋಷ್ ಅವರ ನೇತೃತ್ವದ ಆಂತರಿಕ ಲೆಕ್ಕಪರಿಶೋಧನೆಯಲ್ಲಿ ಪವಿತ್ರ ಮಾಲೆಯ ಒಟ್ಟು 81 ಮಣಿಗಳ ಪೈಕಿ 9 ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ.
ಪ್ರಧಾನ ಅರ್ಚಕರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು, ದೇವಾಲಯದಲ್ಲಿ ಪೂಜೆಗಳು ಮತ್ತು ಇತರ ಆಚರಣೆಗಳಿಗೆ ಬಳಸಲಾಗುವ ಎಲ್ಲಾ ವಸ್ತುಗಳ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸಂದರ್ಭ ಚಿನ್ನಲೇಪಿತ ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ.
ಮಾಧ್ಯಮಗಳಲ್ಲಿ ಸುದ್ದಿ ಬಹಿರಂಗವಾಗುತ್ತಿದ್ದಂತೆ ಸಂಚಲನಕ್ಕೆ ಕಾರಣವಾಗಿದ್ದು, ದೇವಾಲಯದ ಸಲಹಾ ಸಮಿತಿ ಮತ್ತು ಭಕ್ತರು ತನಿಖೆಗೆ ಒತ್ತಾಯಿಸಿದ್ದಾರೆ. ಮಣಿಗಳನ್ನು ಯಾರಾದರೂ ಕದ್ದಿದ್ದಾರೆಯೇ ಅಥವಾ ಮೂಲ ರುದ್ರಾಕ್ಷ ಮಾಲೆಯನ್ನು ಕಡಿಮೆ ಸಂಖ್ಯೆಯ ಮಣಿಗಳಿರುವ ಮಾಲೆ ಮೂಲಕ ಬದಲಾಯಿಸಲಾಗಿದೆಯೇ ಎಂದು ತನಿಖೆಯಿಂದ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.
ಈ ಕುರಿತಂತೆ, ದೇವಾಲಯದ ಆಡಳಿತ ಮಂಡಳಿಯಾಗಿರುವ ತಿರುವಾಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ಪವಿತ್ರ ಆಭರಣ (ತಿರುವಾಭರಣಂ)ಗಳ ಉಸ್ತುವಾರಿ ಹೊತ್ತಿದ್ದ ಆಯುಕ್ತರಿಂದ ವರದಿ ಕೇಳಿದೆ. ಪವಿತ್ರ ಆಭರಣದಲ್ಲಿರುವ ಒಟ್ಟು 81 ಮಣಿಗಳಲ್ಲಿನ 9 ಮಣಿಗಳು ಆಡಿಟ್ ಸಮಯದಲ್ಲಿ ಕಾಣೆಯಾಗಿರುವುದು ನಿಜ ಎಂದು ಟಿಡಿಬಿ ಅಧ್ಯಕ್ಷ ಎನ್ ವಾಸು ದೃಢಪಡಿಸಿದ್ದಾರೆ.
'ಘಟನೆ ಕುರಿತಂತೆ ಸಮಯಕ್ಕೆ ಸರಿಯಾಗಿ ಮಂಡಳಿಗೆ ವರದಿ ಮಾಡದೆ ದೇವಸ್ಥಾನದ ಅಧಿಕಾರಿಗಳ ಕಡೆಯಿಂದ ಲೋಪವಾಗಿದೆ. ಮಣಿಗಳು ಕಾಣೆಯಾದ ಬಗ್ಗೆ ಮಾತ್ರವಲ್ಲದೆ, ಈ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು'ಎಂದು ವಾಸು ಮಾಧ್ಯಮಗಳಿಗೆ ತಿಳಿಸಿದರು.