ಕುಂಬಳೆ: ಪತ್ರಕರ್ತರು ಸಾಮಾಜಿಕ ಬದ್ಧತೆಯನ್ನು ಅರಿತು ಕಾರ್ಯಾಚರಿಸಿದಾಗ ಮಹತ್ವದ ಅಭಿವೃದ್ಧಿಗೆ ಸಹಕಾರಿಯಾಗುವುದಾಗಿ ದಕ್ಷಿಣ ಮಧ್ಯ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ರಮೇಶ್ ಶವ್ವಾಲೆ ತಿಳಿಸಿದ್ದಾರೆ.
ಅವರು ಕಾಸರಗೋಡಿನ ಹಿರಿಯ ಪತ್ರಕರ್ತ ಅಚ್ಯುತ ಚೇವಾರ್ ಅವರಿಗೆ ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕ ಅಂಧೇರಿ ಪೂರ್ವ ಸಾಲೀಟರಿ ಕಾರ್ಪೋರೇಟ್ ಪಾರ್ಕ್ ಕ್ಲಬ್ ಹೌಸ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ 'ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2021'ಪ್ರಶಸ್ತಿ ನೀಡಿ ಮಾತನಾಡಿದರು.
ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲೂ ವೃತ್ತಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಕರ್ತರ ಚಟುವಟಿಕೆ ಕನ್ನಡ-ಮರಾಠಿಗರ ಸಾಮರಸ್ಯಕ್ಕೆ ಸಹಕಾರಿಯಾಗಿರುವುದಾಗಿ ತಿಳಿಸಿದರು. ಮುಂಬೈ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿಗಳಾದ ಜಯರಾಮ ಬಿ.ಶೆಟ್ಟಿ, ಸದಾರಾಮ ಎನ್. ಶೆಟ್ಟಿ, ಪ್ರಶಸ್ತಿ ಅಯ್ಕೆ ಸಮಿತಿ ಕಾರ್ಯಾಧ್ಯಕ್ಷೆ ಡಾ. ಸುನಿತಾ ಎಂ.ಶೆಟ್ಟಿ, ರಂಗ ಎಸ್. ಪೂಜಾರಿ, ಡಾ. ಶಿವರಾಮ ಭಂಡಾರಿ, ಬಂಟರ ಸಂಘ ಮುಂಬೈ ಘಟಕ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ.ಅಮೀನ್, ಚಂದ್ರಶೇಖರ ಎಸ್. ಪೂಜಾರಿ, ಕನ್ನಡ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಸೂರ್ಯಕಾಂತ್ ಜಯಸುವರ್ಣ, ನಿತ್ಯಾನಂದ ಡಿ.ಕೋಟ್ಯಾನ್, ಲಕ್ಷ್ಮಣ ಪೂಜಾರಿ ಚಿತ್ರಾಪು ಮುಂತಾದವರು ಉಪಸ್ಥಿತರಿದ್ದರು. ಪ್ರಶಸ್ತಿಪತ್ರ, 25ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡ ಮಾದ್ಯಮಶ್ರೀ ಪ್ರಶಸ್ತಿಯನ್ನು ಅಚ್ಯುತ ಚೇವಾರ್ ಅವರಿಗೆ ನೀಡಿ ಗೌರವಿಸಲಾಯಿತು.