ನವದೆಹಲಿ: ಕೋವಿಡ್ ಪೀಡಿತ ರೋಗಿಯ ಪರಿಸ್ಥಿತಿ ಎಷ್ಟು ಗಂಭೀರ ಎಂದು ನಿಖರವಾಗಿ ಗುರುತಿಸಬಹುದು ಎನ್ನಲಾದ ತಂತ್ರಜ್ಞಾನವನ್ನು ಐಐಟಿ-ಬಾಂಬೆಯ ತಂಡವು ಸಂಶೋಧಿಸಿದೆ. ಹೆಸರಾಂತ ಔಷಧ ಉತ್ಪಾದನಾ ಕಂಪನಿಯೊಂದು ಈ ತಂತ್ರಜ್ಞಾನ ಆಧರಿಸಿ ವಾಣಿಜ್ಯ ಬಳಕೆ ಕಿಟ್ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದ್ದು, ಕಾರ್ಯಪ್ರವೃತ್ತವಾಗಿದೆ.
ಪ್ರಸ್ತುತ, ಸೋಂಕಿನ ಪರಿಣಾಮ ಹಾಗೂ ರೋಗಿಯ ಆರೋಗ್ಯ ಸ್ಥಿತಿ ಎಷ್ಟು ಗಂಭೀರ ಎಂದು ಖಚಿತವಾಗಿ ಅಂದಾಜಿಸಲು ಯಾವುದೇ ನಿಖರ ಕ್ರಮಗಳಿಲ್ಲ. ಗೋಲ್ಡ್ ಗುಣಮಟ್ಟದ ಆರ್ಟಿ-ಪಿಸಿಆರ್ ತಪಾಸಣೆಯಿಂದ ವ್ಯಕ್ತಿ ಸೋಂಕು ಪೀಡಿತನೇ ಎಂದಷ್ಟೇ ಗುರುತಿಸಬಹುದು. ಆದರೆ, ಗಂಭೀರತೆಯನ್ನು ತಿಳಿಸುವುದಿಲ್ಲ.
ಐಐಟಿ ಬಾಂಬೆ, ಜೈವಿಕ ವಿಜ್ಞಾನ ಮತ್ತು ಜೈವಿಕ ಎಂಜಿನಿಯರಿಂಗ್ ವಿಭಾಗದ ಸಂಜೀವ ಶ್ರೀವಾತ್ಸವ ನೇತೃತ್ವದ ತಂಡವು ಕಸ್ತೂರಬಾ ಹಾಸ್ಪಿಟಲ್ನ ಸಂಶೋಧಕರ ಸಹಯೋಗದಲ್ಲಿ ಸೋಂಕು ಗಂಭೀರತೆ ಪತ್ತೆ ಪರಿಕರ ಕುರಿತು ಕಾರ್ಯತತ್ಪರವಾಗಿದೆ. ಗಂಭೀರ ಮತ್ತು ಗಂಭೀರವಲ್ಲದ ಸ್ಥಿತಿಯ ಕೋವಿಡ್ ಪೀಡಿತರನ್ನು ಗುರುತಿಸಲು ಪೂರಕವಾದ ಆರು ಪ್ರೊಟೀನ್ಗಳನ್ನು ತಂಡ ಗುರುತಿಸಿದೆ. ಗಂಟಲುದ್ರವಗಳ ಮಾದರಿಗಳಲ್ಲಿ ಇಂಥ ಅಂಶದ ಪತ್ತೆಗೆ ವಿಸ್ತೃತ ತಪಾಸಣಾ ಕಾರ್ಯವನ್ನೂ ಕೈಗೊಂಡಿದೆ.
ಹಕ್ಕುಸ್ವಾಮ್ಯ ಹೊಂದಿರುವ ಈ ತಂತ್ರಜ್ಞಾನವನ್ನು ಆಧರಿಸಿ ಸರಳವಾದ ತಪಾಸಣಾ ಕಿಟ್ ಅಭಿವೃದ್ಧಿ ಪಡಿಸಲು ಮರೆಕ್ ಇಂಡಿಯಾ ಸಂಸ್ಥೆಯ ಜೊತೆಗೆ ನಾವು ಸಹಭಾಗಿತ್ವ ಹೊಂದಿದ್ದೇವೆ ಎಂದು ಶ್ರೀವಾತ್ಸವ ತಿಳಿಸಿದರು. ಇಂತಹ ಕಿಟ್ ಅಭಿವೃದ್ಧಿಗೆ ಪೂರಕವಾಗಿ ಐಐಟಿಯಲ್ಲಿ ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆಗೆ ಐಐಟಿ ಬಾಂಬೆಗೆ ₹ 1.75 ಕೋಟಿಯನ್ನು ಕಂಪನಿ ನೀಡಿದೆ.