ಪಾಲಕ್ಕಾಡ್: ಮಂಬರಂನಲ್ಲಿ ಆರ್ಎಸ್ಎಸ್ ಕಾರ್ಯಕರ್ತನನ್ನು ಹಾಡಹಗಲೇ ಕಡಿದು ಹತ್ಯೆಗೈದ ಘಟನೆಯ ಆರೋಪಿಗಳಿಗಾಗಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೃತ ಎಲಪ್ಪುಳ್ಳಿಯ ಸಂಜಿತ್ (27) ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿಗಳು ತ್ರಿಶೂರ್ ಕಡೆಗೆ ಪಲಾಯನಗ್ಯೆದಿದ್ದಾರೆ. ಪಾಲಿಯೆಕ್ಕರ ಟೋಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುವುದು. ಆರೋಪಿಗಳ ಪತ್ತೆಗೆ ಇತರ ಜಿಲ್ಲೆಗಳಿಗೂ ತನಿಖೆ ವಿಸ್ತರಿಸಲಾಗಿದೆ. ಕುನ್ನಂಕುಳಂ, ಚಾವಕ್ಕಾಡ್, ಕೊಡುಂಗಲ್ಲೂರು, ಚೆರೈ ಮತ್ತು ಪೊನ್ನಾನಿ ಪ್ರದೇಶಗಳಲ್ಲಿ ತನಿಖೆ ಪ್ರಗತಿಯಲ್ಲಿದೆ. ಬಿಳಿ ಮಾರುತಿ 800 ಕಾರಿನಲ್ಲಿ ಆರೋಪಿಗಳು ಹತ್ಯೆ ಮಾಡಿದ ಬಳಿಕ ಪಲಾಯನಗ್ಯೆದಿರುವರೆಂದು ತಿಳಿದು ಬಂದಿದೆ. ಆದರೆ, ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಕಾರು ಪಲ್ಟಿಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಪತ್ತೆ ಹಚ್ಚುವ ಪ್ರಯತ್ನವೂ ತೀವ್ರಗೊಂಡಿದೆ. ತನಿಖೆಗಾಗಿ ಪೊಲೀಸರು ಎಂಟು ತಂಡಗಳನ್ನು ನಿಯೋಜಿಸಿದ್ದಾರೆ.
ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಭೀಕರ ಕೊಲೆ ನಡೆದಿದೆ. ಪತ್ನಿಯನ್ನು ನಗರದಲ್ಲಿ ಉದ್ಯೋಗ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಕಾರಿನಲ್ಲಿ ಆಗಮಿಸಿದ ತಂಡ ಬೈಕ್ಗೆ ಡಿಕ್ಕಿ ಹೊಡೆದಿದೆ. ರಸ್ತೆಯಲ್ಲಿ ಬಿದ್ದ ಸಂಜಿತ್ ನನ್ನು ಪತ್ನಿ ಅರ್ಷಿಕಾ ಅವರ ಎದುರೇ ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಂಜಿತ್ ಮೃತಪಟ್ಟಿದ್ದರು. ದೇಹದ ಮೇಲೆ ಸುಮಾರು ಮೂವತ್ತು ಗಾಯಗಳಾಗಿವೆ. ಸಂಜಿತ್ ಮೇಲೆ ಈಗಾಗಲೇ ಕಳೆದ ವರ್ಷ ಎಸ್ ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸಲಾಗಿದ್ದರೂ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಕೊಲೆಗೆ ಕಾರಣವಾಯಿತು ಎಂಬ ತೀವ್ರ ಟೀಕೆ ವ್ಯಕ್ತವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠ ಆರ್.ವಿಶ್ವನಾಥ್ ಕೂಡ ಇದೊಂದು ರಾಜಕೀಯ ಹತ್ಯೆ ಎಂದು ಬಣ್ಣಿಸಿದ್ದಾರೆ. ಹತ್ಯೆಯ ಹಿಂದೆ ಎಸ್ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಮತ್ತು ಆರ್ಎಸ್ಎಸ್ ಹೇಳಿಕೊಂಡಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ನಿನ್ನೆ ಸಂಜೆ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮನೆಗೆ ತರಲಾದ ಪಾರ್ಥಿವ ಶರೀರವನ್ನು ಬೃಹತ್ ಜನಸ್ತೋಮದ ಸಮ್ಮುಖದಲ್ಲಿ ಚಂದ್ರನಗರದ ವಿದ್ಯುತ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಸಂಜಿತ್ ಅವರು ಪತ್ನಿ, ಪುತ್ರ ರುದ್ರ ಕೇಶವ್(11 ತಿಂಗಳ ಮಗು) ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.