ಕಾಸರಗೋಡು: ಕೋವಿಡ್ ಅವಧಿಯಲ್ಲಿ ಯುವಜನತೆಯ ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕಲಾಲಯ ಜ್ಯೋತಿ ಜನಜಾಗೃತಿ ಕಾರ್ಯಕ್ರಮವನ್ನು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನ್ಯಾಯವಾದಿ ಪಿ.ಸತೀದೇವಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಯೋಗದ ಅದಾಲತ್ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಿರುವನಂತಪುರಂನಲ್ಲಿ ಈ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ. ಯುವಜನತೆಯ ಮಾನಸಿಕ ಸಮಸ್ಯೆಗಳನ್ನು ಕಡಿತಗೊಳಿಸಲು ಆಯೋಗ ಬಯಸುತ್ತಿದೆ. ಮಹಿಳೆಯರ,ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗಳನ್ನು ಪತ್ತೆ ಮಾಡಿ ಪರಿಹರಿಸುವ ನಿಟ್ಟಿನಲ್ಲಿ ತ್ರಿಸ್ತರ ಪಂಚಾಯತ್ ಗಳ ನೇತೃತ್ವದಲ್ಲಿ ನಡೆಸಲಾಗುತ್ತಿರುವ ವಾರ್ಡ್ ಮಟ್ಟದ ಜಾಗೃಥಿ ಸಮಿತಿಗಳ ಚಟುವಟಿಕೆಗಳು ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ರೀತಿ ನಡೆದುಬರುತ್ತಿವೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ, ಕಾಸರಗೋಡು ಜಿಲ್ಲೆಯಲ್ಲಿ ದೂರುಗಳ ಸಂಖ್ಯೆ ಕಡಿಮೆ ಎಂದವರು ನುಡಿದರು.
ಅದಾಲತ್ ನಲ್ಲಿ ಒಟ್ಟು 35 ದೂರುಗಳ ಪರಿಶೀಲನೆ ನಡೆದು, 9 ದೂರುಗಳಿಗೆ ತೀರ್ಪು ನೀಡಲಾಗಿದೆ. 25 ದೂರುಗಳನ್ನು ಮುಂದಿನ ಅದಾಲತ್ ನಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.
ಆಯೋಗ ಅಧ್ಯಕ್ಷೆ ನ್ಯಾಯವಾದಿ ಪಿ.ಸತೀದೇವಿ ಅವರಿಗೆ ಇನ್ನು ಮುಂದೆ ಕಾಸರಗೊಡು ಜಿಲ್ಲೆಯ ಹೊಣೆ ನೀಡಲಾಗಿದೆ. ಸದಸ್ಯೆ ಶಾಹಿದಾ ಕಮಾಲ್, ನ್ಯಾಯವಾದಿಗಳ ಪ್ಯಾನೆಲ್ ನ ರೇಣುಕಾ ತಂಗಚ್ಚಿ, ಟಿಟ್ಟಿ ಮೊದಲಾದವರು ಉಪಸ್ಥಿತರಿದ್ದರು.