ಪತ್ತನಂತಿಟ್ಟ: ಶಬರಿಮಲೆಗೆ ಆಗಮಿಸುವ ಅಯ್ಯಪ್ಪ ಭಕ್ತರಿಗೆ ಮೂಲ ಸೌಕರ್ಯವನ್ನೂ ಕಲ್ಪಿಸದೆ ರಾಜ್ಯ ಸರ್ಕಾರ ಕ್ರೌರ್ಯ ಮೆರೆದಿದೆ ಎಂದು ದೂರಲಾಗಿದೆ. ದೇವಸ್ಥಾನ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದ್ದರೂ ಭಕ್ತರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಎರುಮೇಲಿಯಲ್ಲಿ ವಿಶಾಲವಾದ ಕಾಲ್ನಡಿಗೆ ದಾರಿಯಲ್ಲಿ ವಿಶ್ರಾಂತಿ ವ್ಯವಸ್ಥೆಗಳಿಲ್ಲ. ಈ ಪ್ರದೇಶದಲ್ಲಿ ಯಾವುದೇ ಆಹಾರ ಮಳಿಗೆಗಳಿಲ್ಲ. ವಿವಿಧ ರಾಜ್ಯಗಳ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಎರುಮೇಲಿಯಲ್ಲಿ ಆರ್ ಟಿ ಪಿ ಸಿ ಆರ್ ತಪಾಸಣಾ ಸೌಲಭ್ಯವೂ ಇಲ್ಲ ಎನ್ನುತ್ತಾರೆ ಭಕ್ತರು. ಶಬರಿಮಲೆಯಲ್ಲಿ ಕೊರೊನಾ ಪರೀಕ್ಷೆ ನಡೆಸಲು ಸೌಲಭ್ಯ ಕಲ್ಪಿಸುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಆದರೆ ಅದು ಈಗ ಬಿಕ್ಕಟ್ಟಿನಲ್ಲಿದೆ ಎನ್ನುತ್ತಾರೆ ಭಕ್ತರು. ಗುಂಪಿನಲ್ಲಿ ಮಕ್ಕಳೂ ಸೇರಿದಂತೆ ಯಾತ್ರಾರ್ಥಿಗಳು ಇದ್ದಾರೆ. ಆದರೆ ಈ ಪ್ರದೇಶದಲ್ಲಿ ಊಟ ಮಾಡಲು ಹೋಟೆಲ್ ಅಥವಾ ವಸತಿ ಇಲ್ಲ ಎಂದು ಯಾತ್ರಾರ್ಥಿಗಳು ದೂರುತ್ತಾರೆ. ಇದೇ ವೇಳೆ ನಿಲಕ್ಕಲ್ ನಲ್ಲಿ ಆರ್ ಟಿಪಿಸಿಆರ್ ತಪಾಸಣೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ದೇಶದ ನಾನಾ ಭಾಗಗಳಿಂದ ಆಗಮಿಸಿದ ಅಯ್ಯಪ್ಪ ಭಕ್ತರು ರಸ್ತೆಯಲ್ಲೇ ಮಲಗಿದ್ದಾರೆ ಎನ್ನುತ್ತಾರೆ ಎರುಮೇಲಿಯ ಭಕ್ತರು. ಈ ಬಗ್ಗೆ ದೇವಸ್ವಂ ಮಂಡಳಿಗಾಗಲಿ, ಪೋಲೀಸರಿಗಾಗಲಿ, ಆರೋಗ್ಯ ಇಲಾಖೆಗಾಗಲಿ ಏನೂ ತಿಳಿದಿಲ್ಲ. ಸರ್ಕಾರದ ಬೇಜವಾಬ್ದಾರಿ ವರ್ತನೆಗೆ ಇದು ಸಾಕ್ಷಿಯಾಗಿದೆ. ಸದ್ಯ ಒಂದೇ ಆಶ್ರಯ ಮನೆ ಇದೆ. ಆದರೆ ಅದನ್ನು ತೆರೆದು ಭಕ್ತರನ್ನು ಅಲ್ಲಿಗೆ ವ್ಯವಸ್ಥೆಗೊಳಿಸಲು ಸಹ ದೇವಸ್ವಂ ಮಂಡಳಿ ಸಿದ್ಧವಿಲ್ಲ ಎಂಬ ಆರೋಪವಿದೆ.
ಶಬರಿಮಲೆಯಲ್ಲಿ ಈ ಸಾಲಿನ ಉತ್ಸವ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಭಕ್ತರಿಗೆ ಇಂದಿನಿಂದ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡಲಾಗಿದ್ದು ಎರುಮೇಲಿ ತಲುಪಿದ ಭಕ್ತರಿಗೆ ಊಟ ಮಾಡಲು, ದಣಿವು ನೀಗಿಸಲು ಕೂಡ ಸೌಲಭ್ಯವಿಲ್ಲ ಎಂಬ ದೂರುಗಳು ಬಂದಿವೆ. ನಿಲಕ್ಕಲ್ ನಲ್ಲಿ ನಿನ್ನೆ-ಮೊನ್ನೆಯೂ ಭಕ್ತರು ಇದೇ ಪರಿಸ್ಥಿತಿ ಎದುರಿಸಿದ್ದರು. ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ದೇಗುಲಕ್ಕೆ ಭಕ್ತಾದಿಗಳಿಗೆ ಪ್ರವೇಶ ಅನುಮತಿ ನೀಡಿರುವ ಸರ್ಕಾರ ಅವರಿಗೆ ನೀಡಬೇಕಾದ ಸೌಲಭ್ಯಗಳನ್ನು ಏಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ.