ಕೊಚ್ಚಿ: ರಾಜ್ಯದಲ್ಲಿ ರಸ್ತೆಬದಿಗಳಲ್ಲಿರುವ ಅಕ್ರಮ ಧ್ವಜಸ್ತಂಭಗಳಿಗೆ ಲೆಕ್ಕವಿಲ್ಲ ಎಂದು ಕೇರಳ ಹೈಕೋರ್ಟ್ ಸೋಮವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಎಲ್ಲೆಂದರಲ್ಲಿ ಅಕ್ರಮ ಧ್ವಜಸ್ತಂಭಗಳು ರಾರಾಜಿಸುತ್ತಿವೆ. ಇದನ್ನು ವಿಲೇವಾರಿಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಭಯದಿಂದ ಇದನ್ನು ಬದಲಾಯಿಸಲು ಯಾರಿಗೂ ಧೈರ್ಯವಿಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಇದು ಕಾನೂನು ವ್ಯವಸ್ಥೆಯ ಕೊರತೆಯಾಗಿದೆ. ಅನುಮತಿಯಿಲ್ಲದೆ ಯಾರು ಬೇಕಾದರೂ ಧ್ವಜಸ್ತಂಭಗಳನ್ನು ಸ್ಥಾಪಿಸಬಹುದು ಎಂಬುದು ರಾಜ್ಯದ ನಿಲುವು ಎಂದು ನ್ಯಾಯಾಲಯ ಕುಟುಕಿದೆ.
ರಾಜ್ಯದಲ್ಲಿ 42337 ಧ್ವಜಸ್ತಂಭಗಳಿವೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಇವುಗಳಲ್ಲಿ ಎಷ್ಟು ಅಕ್ರಮ ಎಂಬ ಪ್ರಶ್ನೆಗೆ ಸರ್ಕಾರ ನಿಖರ ಅಂಕಿ-ಅಂಶ ನೀಡದೆ ಗೊತ್ತಿಲ್ಲ ಎಂದು ವಿಲಕ್ಷಣವಾಗಿ ಉತ್ತರಿಸಿದೆ. ಅಂದಾಜು ಎಷ್ಟು ಪ್ರದೇಶಗಲಲಲಿ ಧ್ವಜಸ್ತಂಭಗಳಿದೆ ಎಂಬುದೂ ಸರ್ಕಾರಕ್ಕೆ ಗೊತ್ತಿಲ್ಲದಿರುವುದು ‘ಗಂಭೀರ’ ಎಂದು ನ್ಯಾಯಾಲಯ ಹೇಳಿದೆ.
ಅಕ್ರಮ ಧ್ವಜಸ್ತಂಭ ವಿಚಾರದಲ್ಲಿ ತನ್ನ ನಿಲುವು ತಿಳಿಸಲು ಇನ್ನೂ ಹತ್ತು ದಿನ ಬೇಕು ಎಂದು ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲಿಯವರೆಗೆ ಯಾವುದೇ ಹೊಸ ಧ್ವಜಸ್ತಂಭಗಳನ್ನು ನಿರ್ಮಿಸದಂತೆ ನ್ಯಾಯಾಲಯ ಸೂಚಿಸಿದೆ. ಅಕ್ರಮ ಧ್ವಜಸ್ತಂಭಗಳನ್ನು ನಿರ್ಮಿಸುವವರ ವಿರುದ್ಧ ಭೂ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಧ್ವಜಸ್ತಂಭಗಳನ್ನು ನಿರ್ಮಿಸಿದವರು 10 ದಿನಗಳಲ್ಲಿ ಸ್ವಯಂಪ್ರೇರಣೆಯಿಂದ ಅವುಗಳನ್ನು ತೆಗೆದುಹಾಕುವಂತೆ ಹೈಕೋರ್ಟ್ ಸೂಚಿಸಿದೆ.