ನವದೆಹಲಿ: ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸುವುದಕ್ಕಾಗಿ ಉನ್ನತ ಅಧಿಕಾರಿಗಳ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ಸ್ಥಾಪಿಸಲು ಭಾರತ ಹಾಗೂ ಮಧ್ಯ ಏಷ್ಯಾದ ಐದು ರಾಷ್ಟ್ರಗಳು ಗುರುವಾರ ನಿರ್ಧರಿಸಿದವು.
ನವದೆಹಲಿ: ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸುವುದಕ್ಕಾಗಿ ಉನ್ನತ ಅಧಿಕಾರಿಗಳ ಮಟ್ಟದ ಜಂಟಿ ಕಾರ್ಯಪಡೆಯೊಂದನ್ನು ಸ್ಥಾಪಿಸಲು ಭಾರತ ಹಾಗೂ ಮಧ್ಯ ಏಷ್ಯಾದ ಐದು ರಾಷ್ಟ್ರಗಳು ಗುರುವಾರ ನಿರ್ಧರಿಸಿದವು.
ಮಧ್ಯ ಏಷ್ಯಾದ ಐದು ರಾಷ್ಟ್ರಗಳ ಅಧ್ಯಕ್ಷರೊಂದಿಗೆ ನಡೆದ ಮೊದಲ ವರ್ಚುವಲ್ ಶೃಂಗಸಭೆಯಲ್ಲಿಈ ನಿರ್ಣಯ ಕೈಗೊಳ್ಳಲಾಯಿತು ಎಂದು ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ (ಪಶ್ಚಿಮ) ರೀನತ್ ಸಂಧು ಹೇಳಿದ್ದಾರೆ.
'ಪ್ರತಿ ಎರಡು ವರ್ಷಗಳಿಗೊಮ್ಮೆ ಶೃಂಗಸಭೆಯನ್ನು ಆಯೋಜಿಸಲು ನಾಯಕರು ನಿರ್ಧರಿಸಿದರು. ಮುಂದಿನ ಸಭೆ 2024ರಲ್ಲಿ ನಡೆಯುವ ನಿರೀಕ್ಷೆ ಇದೆ' ಎಂದೂ ಅವರು ಹೇಳಿದ್ದಾರೆ.
ವರ್ಚುವಲ್ ಆಗಿ ನಡೆದ ಈ ಶೃಂಗಸಭೆಯನ್ನು ಭಾರತ ಆಯೋಜಿಸಿತ್ತು. ಕಜಕಸ್ತಾನ ಅಧ್ಯಕ್ಷ ಕಸ್ಸೀಮ್ ಜೋಮರ್ಟ್ ತೋಕಯೇವ್, ಶವ್ಕತ್ ಮಿರ್ಜಿಯೋಯೇವ್ (ಉಜ್ಬೇಕಿಸ್ತಾನ), ಎಮೊಮಲಿ ರೆಹಮೋನ್ (ತಜಿಕಿಸ್ತಾನ), ಗುರ್ಬಂಗುಲಿ ಬರ್ದಿಮುಹಮೆದೋವ್ ಹಾಗೂ ಕಿರ್ಗಿಸ್ತಾನದ ಅಧ್ಯಕ್ಷ ಸಾದಿರ್ ಜಪಾರೋವ್ ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,' ಪ್ರಾದೇಶಿಕತ ಸುರಕ್ಷತೆಗಾಗಿ ಭಾರತ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ಸಹಕಾರ ಅಗತ್ಯ. ಅದರಲ್ಲೂ, ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದಕ್ಕೆ ಈಗ ಮತ್ತಷ್ಟೂ ಮಹತ್ವ ಇದೆ' ಎಂದರು.
'ಮಧ್ಯ ಏಷ್ಯಾ ಹಾಗೂ ಭಾರತದ ನಡುವೆ ಮುಂದಿನ 30 ವರ್ಷಗಳ ಅವಧಿಗೆ ಸಹಕಾರ ಹಾಗೂ ಸಂವಹನ-ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವುದು ಅಗತ್ಯ' ಎಂದು ಮೋದಿ ಪ್ರತಿಪಾದಿಸಿದರು.