ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್ (Union Budget 2022-23)ಗೆ ದಿನಗಣನೆ ಆರಂಭವಾಗಿದೆ. ಮುಂದಿನ ವಾರ ಫೆಬ್ರವರಿ 1ರಂದು ಅವರು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೋವಿಡ್ -19 ಸಾಂಕ್ರಾಮಿಕದ ನಂತರ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವತ್ತ ಕೇಂದ್ರೀಕರಿಸಿದೆ.
ಕೊರೊನಾ ಮಹಾಮಾರಿಯ ಹೊಸ ಅಲೆಯ ಮಧ್ಯೆ ಬರುತ್ತಿರುವ ಈ ಬಜೆಟ್ನಿಂದ ಜನರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಈ ಮಧ್ಯೆ ಕಳೆದ ಬಾರಿಯಂತೆ ಈ ಸಲವೂ ಬಜೆಟ್ ಕಾಗದ ರಹಿತವಾಗಿರಲಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಲೋಕಸಭೆಯ ಎಲ್ಲ ಸದಸ್ಯರಿಗೂ ಬಜೆಟ್ನ ಡಿಜಿಟಲ್ ಪ್ರತಿಯನ್ನು ನೀಡಲಾಗುತ್ತದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿ “ಹಲ್ವಾ” ಸಮಾರಂಭವನ್ನೂ ಸಹ ಆಯೋಜನೆ ಮಾಡಿಲ್ಲ.
ಹಲ್ವಾಗೂ ಬಜೆಟ್ಗೂ ಏನು ಸಂಬಂಧ?
ಸಾಂಪ್ರದಾಯಿಕವಾಗಿ ಬಜೆಟ್ ಮುದ್ರಣದ ಕೆಲಸವು “ಹಲ್ವಾ” ಸಮಾರಂಭದಿಂದ ಪ್ರಾರಂಭವಾಗುತ್ತದೆ. ಇದಾದ ಬಳಿಕ ಬಜೆಟ್ ಸಿದ್ಧಪಡಿಸುವ ಎಲ್ಲ ಅಧಿಕಾರಿಗಳನ್ನು ಸಚಿವಾಲಯದ ನೆಲಮಾಳಿಗೆಯಲ್ಲಿ ಲಾಕ್ ಮಾಡಲಾಗುತ್ತದೆ. ಲೋಕಸಭೆಯಲ್ಲಿ ಬಜೆಟ್ ಮಂಡನೆಯಾದ ಬಳಿಕ ಅಧಿಕಾರಿಗಳು ಯಾರನ್ನಾದರೂ ಭೇಟಿ ಮಾಡಬಹುದು. ಆದರೆ, ಈ ಬಾರಿ “ಹಲ್ವಾ” ಸಮಾರಂಭ ಆಯೋಜಿಸಿಲ್ಲ. ಬಜೆಟ್ ಮಂಡನೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ, ಸಹಾಯಕರಿಗೆ “ಸಿಹಿತಿಂಡಿ”ಯನ್ನಷ್ಟೇ ನೀಡಲಾಗಿದೆ. ಇದು ಸಹ ಕೇಂದ್ರ ಸರ್ಕಾರದ ಬಜೆಟ್ ಸಂಪ್ರದಾಯದ ಮತ್ತೊಂದು ಬದಲಾವಣೆ ಎನ್ನಬಹುದಾಗಿದೆ.
ಬಜೆಟ್ನ ಡಿಜಿಟಲ್ ಪ್ರತಿ ಪಡೆಯೋದು ಹೇಗೆ?
ಕಳೆದ ಬಾರಿಯಂತೆ ಈ ಸಲವೂ ಕಾಗದ ರಹಿತ ಬಜೆಟ್ ಆಗಲಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಉಪಯುಕ್ತ ವಿಚಾರವಾಗಿದೆ. ಇನ್ನೊಂದೆಡೆ ಮೊಬೈಲ್ ಆಪ್ ಮೂಲಕವೂ ಈ ಪ್ರತಿ ಲಭ್ಯವಾಗಲಿದೆ. ಇದಕ್ಕಾಗಿ ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ (union budget mobile app) ಲಭ್ಯವಿದೆ. ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಲಭ್ಯವಿರುವ ಈ ಅಪ್ಲಿಕೇಶನ್ ಅನ್ನು ಯೂನಿಯನ್ ಬಜೆಟ್ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬಹುದು. ಇದಲ್ಲದೆ, ಈ ಅಪ್ಲಿಕೇಶನ್ Android ಮತ್ತು iOS ನ ಆಪ್ ಸ್ಟೋರ್ನಲ್ಲಿಯೂ ದೊರೆಯಲಿದೆ. ಎಲ್ಲಾ ಬಜೆಟ್ ದಾಖಲೆಗಳು ವೆಬ್ಸೈಟ್ನಲ್ಲಿಯೂ ಲಭ್ಯ ಇರುತ್ತವೆ.
ಕಳೆದ 4 ವರ್ಷಗಳಿಂದ ಸಂಪ್ರದಾಯಗಳು ಬದಲಾಗಿವೆ!
ಈ ಬಾರಿ ಮಂಡಿಸಲಿರುವ ಬಜೆಟ್ ನಿರ್ಮಾಲಾ ಸೀತಾರಾಮನ್ ಅವರ ನಾಲ್ಕನೇ ಬಜೆಟ್ ಆಗಲಿದೆ. ಭಾರತದ ಬಜೆಟ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಮಂಡಿಸಿದ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಸೀತಾರಾಮನ್ ಹೊಂದಲಿದ್ದಾರೆ. ಈ ಮೊದಲು ಪ್ರಧಾನಿ ಇಂದಿರಾಗಾಂಧಿ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದರು, ಆ ಸಂದರ್ಭದಲ್ಲಿ ಇಂದಿರಾ ಗಾಂಧಿ ಹಣಕಾಸು ಸಚಿವಾಲಯದ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದರು. ನಿರ್ಮಲಾ ಸೀತಾರಾಮನ್ ಅವರು ವಿತ್ತ ಖಾತೆ ವಹಿಸಿಕೊಂಡ ಮೇಲೆ ಬಜೆಟ್ ಸಂಪ್ರದಾಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಲೆದರ್ ಬ್ರೀಫ್ ಕೇಸ್ ನಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ಜಾರಿಯಲ್ಲಿತ್ತು. ಬದಲಿಗೆ ನಿರ್ಮಲಾ ಸೀತಾರಾಮನ್ ಅವರು ಕೆಂಪು ಬಟ್ಟೆಯಲ್ಲಿ ಸುತ್ತಿದ ಲೆಡ್ಜರ್ ರೂಪದಲ್ಲಿ ಬಜೆಟ್ ಮಂಡಿಸಿದರು. ಪೇಪರ್ಲೆಸ್ ಬಜೆಟ್ ಮತ್ತು ಹಲ್ವಾ ಸಮಾರಂಭವಿಲ್ಲದೆ ಬಜೆಟ್ ತಯಾರಿಯನ್ನು ಪ್ರಾರಂಭಿಸಿರುವುದು ನಿರ್ಮಲಾ ಸೀತಾರಾಮನ್ ಖಾತೆ ವಹಿಸಿಕೊಂಡ ಆದ ಬದಲಾವಣೆಗಳಾಗಿವೆ.