ನವದೆಹಲಿ:ಭಾರತದಲ್ಲಿ ರಸಗೊಬ್ಬರಗಳ ತೀವ್ರ ಕೊರತೆಯ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟಿನಲ್ಲಿ ಯೂರಿಯಾ ಮತ್ತು ಪೋಷಕಾಂಶ ಆಧಾರಿತ (NPK) ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿದ್ದಾರೆ.
2022-23ರ ಬಜೆಟ್ನಲ್ಲಿ ಯೂರಿಯಾ ಸಬ್ಸಿಡಿಗಾಗಿ ಮಾಡಿರುವ ರೂ. 63,222.32 ಕೋಟಿ ಹಂಚಿಕೆಯು 2021-22ರ ಪರಿಷ್ಕೃತ ಅಂದಾಜುಗಳಿಗಿಂತ (RE) 17 ಪ್ರತಿಶತ ಕಡಿಮೆಯಾಗಿದೆ. NPK ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಹಂಚಿಕೆಯಾದ 42,000 ಕೋಟಿ ರೂ. RE ಗಿಂತ ಶೇಕಡಾ 35 ರಷ್ಟು ಕಡಿಮೆಯಾಗಿದೆ.
ರಸಗೊಬ್ಬರ ಸಬ್ಸಿಡಿ ಮೇಲಿನ ವೆಚ್ಚವನ್ನು ಕೇಂದ್ರ ಕಡಿಮೆ ಮಾಡುತ್ತಿದ್ದು, 2020-21ರಲ್ಲಿ ರಸಗೊಬ್ಬರಗಳ ಮೇಲೆ ಸರ್ಕಾರದ ನಿಜವಾದ ಖರ್ಚು 1,27,921.74 ಕೋಟಿ ರೂಪಾಯಿಗಳು ಆದರೆ, 2021-22ರ ಕೇಂದ್ರ ಬಜೆಟ್ನಲ್ಲಿ ಇದನ್ನು 79,529.68 ಕೋಟಿ ರೂ.ಗೆ ಇಳಿಸಲಾಗಿದೆ. ಕೃಷಿ ಬಿಕ್ಕಟ್ಟಿನ ಮಧ್ಯೆ ಇದನ್ನು 1,40,122.32 ಕೋಟಿ ರೂ.ಗೆ ಪರಿಷ್ಕರಿಸಲಾಯಿತು. ಆದರೆ, ಪ್ರಸಕ್ತ ಬಜೆಟ್ನಲ್ಲಿ ಇದನ್ನು ಸುಮಾರು ಶೇ.25ರಷ್ಟು ಅಂದರೆ 105,222.32 ಕೋಟಿ ರೂ ರಷ್ಟು ಇಳಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ಬೆಲೆಗಳು ಭಾರತೀಯ ರೈತರಿಗೆ ರಸಗೊಬ್ಬರ ಉತ್ಪನ್ನಗಳ ನಿಯಮಿತ ಪೂರೈಕೆಯನ್ನು ಪರಿಣಾಮ ಬೀರುವ ಈ ಸಂದರ್ಭದಲ್ಲೇ ಸಬ್ಸಿಡಿ ಕಡಿತವೂ ಆಗಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಅದೇ ವೇಳೆ, ನರೇಂದ್ರ ಮೋದಿ ಸರ್ಕಾರವು ಮಾರುಕಟ್ಟೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಸಮರ್ಥಿಸಿಕೊಂಡಿದ್ದರೆ, ಅಕ್ಟೋಬರ್ 2021 ರ ಭಾರತ ಸರ್ಕಾರದ ರಸಗೊಬ್ಬರ ಇಲಾಖೆಯಿಂದ ಇಂಟಿಗ್ರೇಟೆಡ್ ಫರ್ಟಿಲೈಸರ್ ಮ್ಯಾನೇಜ್ಮೆಂಟ್ ಸಿಸ್ಟಮ್ (iFMS) ದತ್ತಾಂಶದ ವಿಶ್ಲೇಷಣೆಯು ರಸಗೊಬ್ಬರ ಉತ್ಪನ್ನಗಳ ತೀವ್ರ ಕೊರತೆಯನ್ನು ತೋರಿಸುತ್ತದೆ ಎಂದು Economic and Political Weekly ಯಲ್ಲಿ ಪ್ರಕಟವಾದ ಲೇಖನವು ಹೇಳಿದೆ.
ರಸಗೊಬ್ಬರ ಕೊರತೆಯ ಬಗ್ಗೆ ದೇಶದಲ್ಲಿ ಹಲವಾರು ರೈತ ಪ್ರತಿಭಟನೆಗಳನ್ನು ನಡೆಯುತ್ತಿದೆ. ಕಳೆದ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ರೈತರು ರಸಗೊಬ್ಬರ ಕೊರತೆಯಿಂದಾಗಿ ಬಿತ್ತನೆಯನ್ನು ವಿಳಂಬಗೊಳಿಸಬೇಕಾಯಿತು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ 13 ಜಿಲ್ಲೆಗಳನ್ನು ಒಳಗೊಂಡಿರುವ ಬುಂದೇಲ್ಖಂಡ್ ಪ್ರದೇಶದ ಐವರು ರೈತರು ರಸಗೊಬ್ಬರ ಕೊರತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.