ಕಾಸರಗೋಡು: ಶಿಥಿಲಗೊಂಡಿದ್ದ ಕಾಸರಗೋಡು ನಾಯಕ್ಸ್ ರಸ್ತೆ ಅಭಿವೃದ್ಧಿಕಾರ್ಯಕ್ಕೆ ಕೊನೆಗೂ ನಗರಸಭೆ ಮುಂದಾಗಿದೆ. ಪ್ರಸಕ್ತ ರಸ್ತೆ ಶಿಥಿಲಗೊಂಡು ಹಲವಾರು ತಿಂಗಳು ಕಳೆದಿದ್ದು, ವಾಹನ ಸಂಚಾರ ಸುಗಮಗೊಳಿಸುವಂತೆ ಆಟೋರಿಕ್ಷಾ ಚಾಲಕರು ನಗರಸಭಾ ಅಆಇಕಾರಿಗಳಿಗೆ ದೂರು ನೀಡಿದ ನಂತರ ಎಚ್ಚೆತ್ತುಕೊಂಡಿದ್ದರು.
ನಾಯಕ್ಸ್ ರಸ್ತೆ ಸುಮಾರು 150ಮೀ. ವರೆಗೆ ಹದಗೆಟ್ಟಿದ್ದು, ಪ್ರಸಕ್ತ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. 19ಲಕ್ಷ ರೂ. ಎಸ್ಟಿಮೇಟ್ ನಡೆಸಿದ್ದರೂ, 12ಲಕ್ಷಕ್ಕೆ ಕಾಮಗಾರಿ ಟೆಂಡರ್ ಪಡೆದು ಕೆಲಸ ಆರಂಭಿಸಲಾಗಿದೆ. ರಸ್ತೆಯನ್ನು ಮೆಕ್ಕಡಾಂ ನಡೆಸಿ ಅಭಿವೃದ್ಧಿಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದು, ಕೆಲಸ ಆರಂಭಿಸುವ ಸಂದರ್ಭ ಈ ಬಗ್ಗೆ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಪ್ರಸಕ್ತ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕೆಲಸ ಆರಂಭಿಸಲಾಗಿದೆ. ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಯಕ್ಸ್ ರಸ್ತೆಯಲ್ಲಿ ವಾಹನ ಸಂಚಾರ ಸಥಗಿತಗೊಳಿಸಲಾಗಿದೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭದಲ್ಲೇ ಕಳಪೆ ಕಾಮಗಾರಿ ಬಗ್ಗೆ ದೂರು ಕೇಳಿಬರಲಾರಂಭಿಸಿದ್ದು, ಮೂರು ವರ್ಷದೊಳಗೆ ತಲೆದೀರುವ ದುರಸ್ತಿಕಾರ್ಯಗಳಿಗೆ ಗುತ್ತಿಗೆದಾರ ನೇರ ಜವಾಬ್ದಾರನಾಗಿರುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.