ಬದಿಯಡ್ಕ: ಆರಾಧನಾಲಯಗಳಲ್ಲಿ ಭಕ್ತರಿಗೆ ಪ್ರಸಾದ ಭೋಜನ ನೀಡಿದಾಗ ಅದು ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ದೇವರ ಇಚ್ಛೆ ಮತ್ತು ಭಕ್ತರ ಪರಿಶ್ರಮದ ಫಲವೇ ಈ ಭೋಜನಾಶಾಲೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ನುಡಿದರು.
ಅವರು ಆಲಿಂಜ ಶ್ರೀ ಮಹಾವಿಷ್ಣು ದೇವಸ್ಥಾನ ಬೆಳಿಂಜ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ನೂತನ ಭೋಜನ ಶಾಲೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಸಂಜೀವ ಶೆಟ್ಟಿ ಮೊಟ್ಟೆಕುಂಜ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ಶ್ರೀಧರ ತಂತ್ರಿ, ಗಂಗಾಧರ ಬಲ್ಲಾಳ್ ಅಡ್ವಳ, ಡಾ.ಮೋಹನ್ ದಾಸ್ ರೈ ನಾಟೆಕಲ್ಲು, ಜಯರಾಮ ಭಂಡಾರಿ, ನಾರಾಯಣ ಶೆಟ್ಟಿ ಬೆಳಿಂಜ ಮುಂತಾದವರು ಶುಭಾಸಂಶನೆಗೈದರು. ರಾಮಮೋಹನ್ ಕೆದಿಲಾಯ ಸ್ವಾಗತಿಸಿ, ಹರ್ಷರಾಜ್ ಭಂಡಾರಿ ವಂದಿಸಿದರು. ಹರ್ಷಕುಮಾರ್ ರೈ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು.