ನವದೆಹಲಿ: 2020 ರಲ್ಲಿ ಭಾರತದ ಗಡಿ ಪ್ರದೇಶ ಗಲ್ವಾನ್ ಕಣಿವೆಯಲ್ಲಿ ಉಂಟಾಗಿದ್ದ ಚೀನಾದೊಂದಿಗಿನ ಸಂಘರ್ಷದಲ್ಲಿ ಚೀನಾ ಸೈನ್ಯದಲ್ಲಿ ವರದಿಯಾಗಿದ್ದಕ್ಕಿಂತಲೂ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆ ವರದಿ ಪ್ರಕಟಿಸಿದೆ.
ಭೋರ್ಗರೆದು ಹರಿಯುತ್ತಿದ್ದ ನದಿಯನ್ನು ದಾಟುವಾಗ ಕತ್ತಲಲ್ಲಿ ನದಿಯಲ್ಲಿ ಮುಳುಗಿ ಚೀನಾದ ಹಲವು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಕ್ಲಾಕ್ಸನ್ ಪತ್ರಿಕೆಯ ತನಿಖಾ ವರದಿ ಹೇಳಿದೆ.
ಹೆಸರು ಬಹಿರಂಗಪಡಿಸದ ಚೀನಾದ ಬ್ಲಾಗರ್ ಗಳು, ಸಂಶೋಧಕರು, ಮೈನ್ ಲ್ಯಾಂಡ್ ನ ಸಂಶೋಧಕರನ್ನು ಈ ಪತ್ರಿಕೆ ಉಲ್ಲೇಖಿಸಿದ್ದು, ಅವರು ತಮ್ಮ ಹೆಸರನ್ನು ಭದ್ರತಾ ಕಾರಣದಿಂದ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ ಆದರೆ ಅವರ ಸಂಶೋಧನೆಗಳ ಪ್ರಕಾರ ಚೀನಾ ಕಡೆ ಸೈನ್ಯದಲ್ಲಿ ವರದಿಯಾಗಿರುವುದಕ್ಕಿಂತಲೂ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ ಎಂದು ಪತ್ರಿಕೆ ವರದಿ ಹೇಳಿದೆ.
ಈ ಘರ್ಷಣೆಗೆ ಸಂಬಂಧಿಸಿದಂತೆ ಚೀನೀ ಪಡೆಯ ಗಣನೀಯ ಸಾವುನೋವುಗಳ ಕುರಿತ ವರದಿಗಳು ಹೊಸತೇನು ಅಲ್ಲ. ಆದರೆ ಸಾಮಾಜಿಕ ಜಾಲತಾಣದ ಸಂಶೋಧಕರು ನೀಡಿರುವ ಸಾಕ್ಷ್ಯಗಳು ಬೀಜಿಂಗ್ನಿಂದ ಹೆಸರಿಸಲಾದ ನಾಲ್ಕು ಸೈನಿಕರನ್ನು ಮೀರಿ ಚೀನಾದ ಸಾವುನೋವುಗಳು ಸಂಭವಿಸಿದೆ ಎಂಬ ಸಮರ್ಥನೆಯನ್ನು ಬೆಂಬಲಿಸುವಂತೆ ತೋರುತ್ತದೆ," ಎಂದು ಅದು ಹೇಳಿದೆ.
ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಜೀವ ಕಳೆದುಕೊಂಡಿದ್ದರೆ, ಚೀನಾ ತನ್ನ ಕಡೆಯ ಐವರು ಯೋಧರು, ಸೇನಾ ಅಧಿಕಾರಿಗಳು ಭಾರತೀಯ ಯೋಧರೊಂದಿಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು ಎಂದು ಹೇಳಿಕೊಂಡಿತ್ತು. ಆದರೆ ವಾಸ್ತವದಲ್ಲಿ ಇದಕ್ಕಿಂತಲೂ ಹೆಚ್ಚಿನ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಈ ವರೆಗೂ ಹಲವು ವರದಿಗಳು ಹೇಳಿವೆ. ಈಗ ಹೊಸ ವರದಿಯನ್ನು ಆಸ್ಟ್ರೇಲಿಯಾದ ಪತ್ರಿಕೆ ಪ್ರಕಟಿಸಿದ್ದು, ನಿಜವಾಗಿಯೂ ಏನಾಯಿತು ಎಂಬುದನ್ನು ಬೀಜಿಂಗ್ ಮುಚ್ಚಿಡುತ್ತಿದೆ ಎಂದು ಹೇಳಿದೆ.