ಪೆರ್ಲ :ದಾಸಶ್ರೇಷ್ಠ ಪುರಂದರದಾಸರ ಸ್ಮರಣೆ ಮತ್ತು ದಾಸ ಸಾಹಿತ್ಯದ ಮೆಲುಕು -ಮಥನಗಳ ಸಂಕೀರ್ತನೋತ್ಸವದೊಂದಿಗೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಮಂಗಳವಾರ ಪುರಂದರದಾಸರ ಆರಾಧನೋತ್ಸವ ನಡೆಯಿತು.
ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ನೇತೃತ್ವದಲ್ಲಿ ನಡೆದ ಆರಾಧನೋತ್ಸವದಲ್ಲಿ ಭಜನೆ, ಸಂತ್ಸಂಗ, ಸಮೂಹ ನಾಮಾರ್ಚನೆ, ಶ್ರೀಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ನಡೆಯಿತು. ಬೆಳಿಗ್ಗೆ ಶ್ರೀ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಕಿಶೋರ್ ಪೆರ್ಲ, ಸತ್ಯನಾರಾಯಣ ಪುಣಿಂಚಿತ್ತಾಯ, ರಾಮಚಂದ್ರ ಮಣಿಯಾಣಿ ಇವರ ಸಂಕೀರ್ತನೆಯೊಂದಿಗೆ ಆರಾಧನೋತ್ಸವಕ್ಕೆ ನಾಂದಿಯಾಯಿತು. ಬಳಿಕ ಮಂಗಳೂರು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ, ಸುಳ್ಯ ಮತ್ತು ಕಾಸರಗೋಡು ತಾಲೂಕಿನ ವಿವಿಧ ಭಜನಾ ಮಂಡಳಿ ಸದಸ್ಯೆಯರಿಂದ ಸಂಕೀರ್ತನೆ ನಡೆಯಿತು. ಮಧ್ಯಾಹ್ನ ಸಮೂಹ ನಾಮಾವಳಿಯೊಂದಿಗೆ ನಡೆದ ಸತ್ಸಂಗದಲ್ಲಿ ರಾಮಕೃಷ್ಣ ಕಾಟುಕುಕ್ಕೆ ಅವರೊಂದಿಗೆ ಲೇಖಕ, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರಧಾನ ಸಂಪಾದಕ ಎಂ. ನಾ. ಚಂಬಲ್ತಿಮಾರ್, ಹರಿದಾಸ ಶಂ. ನಾ. ಅಡಿಗ ಕುಂಬಳೆ, ಅರ್ಥದಾರಿ ಶೇಣಿ ವೇಣುಗೋಪಾಲ ಭಟ್ ಪಾಲ್ಗೊಂಡರು.