ನವದೆಹಲಿ: ದೇಶಸೇವೆಯೇ ಭಾರತೀಯ ಜನತಾ ಪಾರ್ಟಿಯ ಪಯಣವಾಗಿದ್ದು, ಕಳೆದ 7 ದಶಕಗಳಿಂದ ಸಮಾಜದ ಬಡವರು, ರೈತರು, ತುಳಿತಕ್ಕೊಳಗಾದವರು ಮತ್ತು ಮಹಿಳೆಯರ ಆಶೋತ್ತರಗಳನ್ನು ಈಡೇರಿಸಲು ಪಕ್ಷ ಕೆಲಸ ಮಾಡುತ್ತಾ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನಿನ್ನೆ ಭಾರತೀಯ ಜನತಾ ಪಕ್ಷದ 42ನೇ ಸಂಸ್ಥಾಪನಾ ದಿನ. ಈ ಸಂದರ್ಭದಲ್ಲಿ ಪಕ್ಷದ ಸ್ಥಾಪನೆ, ಬೆಳವಣಿಗೆ ಬಗ್ಗೆ ಸರಣಿ ಟ್ವೀಟ್ ಗಳ ಮೂಲಕ ಅಮಿತ್ ಶಾ ಬರೆದುಕೊಂಡಿದ್ದಾರೆ.
ಪಕ್ಷದ 42ನೇ ‘ಸ್ಥಾಪನಾ ದಿವಸ್’ (ಸ್ಥಾಪನಾ ದಿನ)ದಂದು ಬಿಜೆಪಿಯನ್ನು ಆಲದ ಮರವನ್ನಾಗಿ ಮಾಡಿದ ಎಲ್ಲ ಮಹಾನ್ ನಾಯಕರಿಗೆ ನಮನಗಳು. ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಜನರ ಕಲ್ಯಾಣ ಮತ್ತು ರಾಷ್ಟ್ರದ ಪ್ರಗತಿಯೊಂದಿಗೆ ಮುನ್ನಡೆಯುತ್ತಿದೆ. ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಸಂಸ್ಥಾಪನಾ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದು ಶಾ ಬರೆದುಕೊಂಡಿದ್ದಾರೆ.
ಏಳು ದಶಕಗಳಿಂದ ವಂಚಿತರಾಗಿರುವ ದೇಶದ ಕೋಟ್ಯಂತರ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಕಾಂಕ್ಷೆಗಳನ್ನು ಈಡೇರಿಸುವ ಮಾಧ್ಯಮವಾಗಿ 2014 ರಿಂದ ಬಿಜೆಪಿ ಶ್ರಮಿಸುತ್ತಿದೆ. ಬಿಜೆಪಿಯ ಈ 42 ವರ್ಷಗಳ ಪಯಣ ದೇಶಸೇವೆ, ರಾಷ್ಟ್ರೋತ್ಥಾನ ಮತ್ತು ರಾಷ್ಟ್ರೀಯ ಪುನರ್ ನಿರ್ಮಾಣದ ಪಯಣವಾಗಿದ್ದು, 2014ರಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು ಕೋಟ್ಯಂತರ ಬಡವರು, ರೈತರು, ದೀನದಲಿತರು ಮತ್ತು ಮಹಿಳೆಯರ ಆಕಾಂಕ್ಷೆಗಳನ್ನು ಈಡೇರಿಸುವ ಪಕ್ಷವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಸರಕಾರ ಬಡವರಿಗೆ ಮನೆ, ವಿದ್ಯುತ್, ಗ್ಯಾಸ್, ಶೌಚಾಲಯ, ಬ್ಯಾಂಕ್ ಖಾತೆ, ಆರೋಗ್ಯ ವಿಮೆ ಕಲ್ಪಿಸುವ ಕೆಲಸ ಮಾಡಿದೆ. 2014ರ ಮೊದಲು ಎರಡು ಹೊತ್ತಿನ ಊಟ ಬಡವರ ಪಾಲಿಗೆ ದೊಡ್ಡ ಹೋರಾಟವಾಗಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಬಿಜೆಪಿ ಸರ್ಕಾರವು ಮನೆ, ವಿದ್ಯುತ್ ಸಂಪರ್ಕ, ಅಡುಗೆ ಅನಿಲ, ಶೌಚಾಲಯ, ಬ್ಯಾಂಕ್ ಖಾತೆ ಮತ್ತು ಆರೋಗ್ಯ ವಿಮೆಯನ್ನು ಒದಗಿಸುವ ಕೆಲಸ ಮಾಡುತ್ತಿದೆ. ದೇಶದ ಬಡವರಿಗೆ ಸುರಕ್ಷಿತ ಮತ್ತು ಗೌರವಯುತ ಜೀವನಕ್ಕಾಗಿ ಉಚಿತ ಪಡಿತರ ನೀಡುತ್ತಿದೆ ಎಂದು ಸಹ ವಿವರಿಸಿದ್ದಾರೆ.
ನಿನ್ನೆ ಬೆಳಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ಮಾಡಿದ್ದಾರೆ. ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿದ್ದಾರೆ. ಅಲ್ಲದೆ ಪಕ್ಷದ ವತಿಯಿಂದ ರಕ್ತದಾನ ಶಿಬಿರ ನಡೆಯುತ್ತಿದೆ.