ನವದೆಹಲಿ:ಚುನಾಯಿತ ಸರಕಾರ ಕೈಗೆತ್ತಿಕೊಳ್ಳಬಹುದಾದ ರಾಜಕೀಯ ಅತಿಸೂಕ್ಷ್ಮ ವಿಷಯಗಳನ್ನು ನಿರ್ಧರಿಸುವ ಹೊಣೆ ಸುಪ್ರೀಂ ಕೋರ್ಟ್ಗೆ ಹೊರೆ ಆಗುತ್ತಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ನಿಮ್ಮ ಎಲ್ಲ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಒಪ್ಪಿದರೆ ಹಾಗೂ ನೀವು ಕೋರಿದ ಆದೇಶವನ್ನು ಜಾರಿ ಮಾಡಿದರೆ, ಲೋಕಸಭೆ, ರಾಜ್ಯ ಸಭೆಗೆ ರಾಜಕೀಯ ಪ್ರತಿನಿಧಿಗಳನ್ನು ಯಾವ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುತ್ತದೆ ?'' ಎಂದು ಅವರು ಪ್ರಶ್ನಿಸಿದರು.
ಅಕ್ರಮ ವಲಸಿಗರನ್ನು ಒಂದು ವರ್ಷದ ಒಳಗೆ ಗುರುತಿಸಲು, ವಶಕ್ಕೆ ತೆಗೆದುಕೊಳ್ಳಲು ಹಾಗೂ ಗಡಿಪಾರು ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರಿಗೆ ಸಿಜೆಐ ಅವರು ಈ ಪ್ರತಿಕ್ರಿಯೆ ನೀಡಿದರು.
ಅಶ್ವಿನಿ ಉಪಾಧ್ಯಾಯ ಅವರ ಅರ್ಜಿಯನ್ನು 2017ರ ಸೆಪ್ಟಂಬರ್ನಲ್ಲಿ ಇಬ್ಬರು ರೊಹಿಂಗ್ಯಾ ವಲಸಿಗರು ಸಲ್ಲಿಸಿದ ಇನ್ನೊಂದು ಮನವಿಯೊಂದಿಗೆ ಸೇರಿಸಲು ಸುಪ್ರೀಂ ಕೋರ್ಟ್ 2018 ಜನವರಿ 31ರಂದು ನಿರ್ದೇಶಿಸಿತ್ತು. ಅಲ್ಲದೆ, ಅದರ ಪ್ರತಿಯನ್ನು ಕೇಂದ್ರ ಸರಕಾರದ ಪರ ವಕೀಲರಿಗೆ ನೀಡುವಂತೆ ನಿರ್ದೇಶಿಸಿತ್ತು.