HEALTH TIPS

ತರಬೇತಿ ಪಡೆದ ಯೋಧರನ್ನು ಬಿಟ್ಟರೆ ಭಯೋತ್ಪಾದಕರು ಅಥವಾ ಬಂಡುಕೋರರನ್ನು ಸೇರುವ ಅಪಾಯವಿದೆ: ನಿವೃತ್ತ ಸೇನಾಧಿಕಾರಿ ಬಕ್ಷಿ

 ನವದೆಹಲಿ:ಭಾರತೀಯ ಸೇನಾ ನೇಮಕಾತಿಗೆ ನರೇಂದ್ರ ಮೋದಿ ಸರ್ಕಾರ 'ಅಗ್ನಿಪಥ್ ' ಹೆಸರಲ್ಲಿ ಹೊಸ ಯೋಜನೆ ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಆಯ್ಕೆಯಾದವರಿಗೆ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.

ನಾಲ್ಕು ವರ್ಷಗಳ ಬಳಿಕ ಆ ಪೈಕಿ 75% ಅಭ್ಯರ್ಥಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಸಂಬಳ ಮತ್ತು ಪಿಂಚಣಿ ಖರ್ಚನ್ನು ಗಣನೀಯವಾಗಿ ಇಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ.

ಯುವಕರಿಗೆ ದೇಶ ಸೇವೆ ಮಾಡಲು ಅವಕಾಶ ನೀಡುವುದು ಇದರ ಉದ್ದೇಶ ಎಂದು ಬಿಜೆಪಿ ಹಾಗೂ ಸರ್ಕಾರ ಪ್ರಚಾರ ಮಾಡುತ್ತಿರುವ ನಡುವೆಯೇ, ವಿಪಕ್ಷಗಳು ಹಾಗು ಕೆಲವು ಮಾಜಿ ಸೇನಾಧಿಕಾರಿಗಳು ಈ ಯೋಜನೆಯ ಬಗ್ಗೆ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಹಾಗೂ ಸಂಘಪರಿವಾರದ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ, ಬಿಜೆಪಿ ಸರ್ಕಾರದ ಪ್ರತಿಯೊಂದು ಹೆಜ್ಜೆಯನ್ನು ಟಿವಿ ಚಾನಲ್ ಗಳಲ್ಲಿ ಹಾಗು ಸೋಷಿಯಲ್ ಮೀಡಿಯಾದಲ್ಲಿ ಬಲವಾಗಿ ಸಮರ್ಥಿಸಿಕೊಂಡೇ ಬಂದಿದ್ದ ನಿವೃತ್ತ ಮೇಜರ್ ಜನರಲ್ ಜಿ.ಡಿ.ಬಕ್ಷಿ ಅವರೇ ಈ ಯೋಜನೆಯನ್ನು ವಿರೋಧಿಸಿದ್ದು, ಇದನ್ನು ಕಾರ್ಯರೂಪಕ್ಕೆ ತರದಂತೆ ಮನವಿಯನ್ನು ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಜನರಲ್ ಜಿ.ಡಿ.ಬಕ್ಷಿ, 'ನಾನು ಅಗ್ನಿವೀರ್ ಯೋಜನೆಯಿಂದ ದಿಗ್ಭ್ರಮೆಗೊಂಡಿದ್ದೇನೆ. ಇದನ್ನು ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರೀಕ್ಷಿಸಲಾಗುತ್ತಿದೆ ಎಂದು ನಾನು ಭಾವಿಸಿದೆ. ಭಾರತೀಯ ಸಶಸ್ತ್ರ ಪಡೆಗಳನ್ನು ಚೀನಿಯರಂತೆ ಅಲ್ಪಾವಧಿಯ ಅರೆ-ಪ್ರತಿನಿಧಿ ಪಡೆಯಾಗಿ ಪರಿವರ್ತಿಸಲು ಇದು ಒಂದು ದೊಡ್ಡ ಹೆಜ್ಜೆಯಾಗಿದೆ. ದೇವರಿಗಾಗಿ ಇದನ್ನು ದಯವಿಟ್ಟು ಮಾಡಬೇಡಿ. ' ಎಂದು ಬರೆದಿದ್ದಾರೆ.


'ಚೀನಾ ಮತ್ತು ಪಾಕ್‌ನಿಂದ ದೊಡ್ಡ ಬೆದರಿಕೆ ಇರುವ ಸಮಯದಲ್ಲಿ ನಮ್ಮ ಸಂಸ್ಥೆಗಳನ್ನು ನಾಶ ಮಾಡಬಾರದು. ಸಶಸ್ತ್ರ ಪಡೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಕೇವಲ ಹಣ ಉಳಿತಾಯಕ್ಕಾಗಿ ನಮ್ಮಲ್ಲಿರುವ (ಸಂಸ್ಥೆಗಳನ್ನು) ನಾಶ ಮಾಡಬಾರದು. ಸಶಸ್ತ್ರ ಪಡೆಗಳಿಗೆ ಯುವ ಮತ್ತು ಅನುಭವದ ಮಿಶ್ರಣದ ಅಗತ್ಯವಿದೆ. 4 ವರ್ಷಗಳ ಅಧಿಕಾರಾವಧಿಯ ಪಡೆಗಳು ಅಪಾಯಕ್ಕೆ ಒಡ್ಡಿಕೊಳ್ಳಲು ಹಿಂಜರಿಯಬಹುದು " ಎಂದೂ ಅವರು ಬರೆದಿದ್ದಾರೆ.

ಭಾರತದ ಎಲ್ಲಾ ಮಿಲಿಟರಿಗಳು ತಮ್ಮ ಸಾಂಸ್ಥಿಕ ಸಂಸ್ಕೃತಿ ಮತ್ತು ನೈತಿಕತೆಯನ್ನು ಹೊಂದಿವೆ. ನಾಲ್ಕು ವರ್ಷದ ʼಟೂರ್‌ ಆಫ್‌ ಡ್ಯೂಟಿʼ (ಅಗ್ನಿವೀರ್) ಅನ್ನು ಹಠಾತ್‌ ಪರಿಚಯಿಸುವುದು ನಕರಾತ್ಮಕ ಬದಲಾವಣೆಯಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಉಕ್ರೇನ್‌ ಮತ್ತು ರಷ್ಯಾವನ್ನು ಉಲ್ಲೇಖಿಸಿದ ಅವರು, (ಯುದ್ಧದ ಸಂದರ್ಭದಲ್ಲಿ) ಬಲವಂತವಾಗಿ ಸೇನೆಗೆ ಸೇರಿಕೊಂಡವರು ಉಕ್ರೇನ್‌ ಸೇನೆಯ ದುರ್ಬಲ ಕೊಂಡಿಯಾಗಿದ್ದರು. ಅವರ ಅನನುಭವ ಮತ್ತು ಏಕೀಕರಣದ ಕೊರತೆಯು ಮಾರಕವಾಯಿತು ಎಂದಿದ್ದಾರೆ.

ತರಬೇತಿ ಪಡೆದ ಮತ್ತು ಯುವ ಮಿಲಿಟರಿ ಮಾನವಶಕ್ತಿಯನ್ನು ನಾಲ್ಕು ವರ್ಷಗಳಲ್ಲೇ ಬಿಟ್ಟು ಬಿಟ್ಟರೆ ಅದು ಅವರು ಭಯೋತ್ಪಾದಕರು ಅಥವಾ ಬಂಡುಕೋರರನ್ನು ಸೇರಲು ಕಾರಣವಾಗಬಹುದು. ಆದಾಯ ಬಜೆಟ್‌ನಲ್ಲಿ ಹಣವನ್ನು ಉಳಿಸಲು ಇದನ್ನು ಮಾಡಲಾಗುತ್ತಿದೆ. ದಯವಿಟ್ಟು ಹಣವನ್ನು ಉಳಿಸಲು ಪರಿಣಾಮಕಾರಿ ಸಂಸ್ಥೆಗಳನ್ನು ನಾಶ ಮಾಡಬೇಡಿ. ಬದಲಾಗಿ ರಕ್ಷಣಾ ಬಜೆಟ್ ಅನ್ನು GDP ಯ 3% ಗೆ ಹೆಚ್ಚಿಸಿ. ಚೀನಾ ಮತ್ತು ಪಾಕ್‌ನಿಂದ ಹೆಚ್ಚಿನ ಬೆದರಿಕೆಗಳಿರುವಾಗ, ದೊಡ್ಡ ಸಾಂಸ್ಥಿಕ ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ಇದು ಸೂಕ್ತ ಸಮಯವಲ್ಲ. ಈ ಹೊಸ ಮಾದರಿಯು ಸಶಸ್ತ್ರ ಪಡೆಗಳ ವೃತ್ತಿಜೀವನದ ಜನಪ್ರಿಯತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಬಕ್ಷಿ ಬರೆದಿದ್ದಾರೆ.

ಇದು ಮಾತ್ರವಲ್ಲದೆ, ಈ ಯೋಜನೆಯ ವಿರುದ್ಧ ಇನ್ನೊಂದು ಆಯಾಮದಲ್ಲೂ ವಿರೋಧ ವ್ಯಕ್ತವಾಗುತ್ತಿದೆ. 18 ರಿಂದ 22 ವರ್ಷ ವಯಸ್ಸಿನ 75% ಜನರು 22-26 ವರ್ಷ ವಯಸ್ಸಿನೊಳಗೆ ನಿರುದ್ಯೋಗಿಗಳಾಗುವ ಈ ಯೋಜನೆ ನಿರುದ್ಯೋಗವನ್ನು ಇನ್ನಷ್ಟು ಉಲ್ಬಣಿಸಲು ಕಾರಣವಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries