ಕಾಸರಗೋಡು: ಬಿಳಿಯಾನೆ ಎಂದೇ ಕುಖ್ಯಾತಿ ಪಡೆದಿರುವ ಕೇರಳ ರಸ್ತೆ ಸಾರಿಗೆ ಸಂಸ್ಥೆ ಎದುರಿಸುತ್ತಿದ್ದ ಇಂಧನ ಕೊರತೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಖಾಸಗಿ ಪೆಟ್ರೋಲ್ ಪಂಪುಗಳಿಂದ ಇಂಧನ ಪಡೆದುಕೊಳ್ಳಲು ಆಯಾ ಡಿಪೋಗಳಿಗೆ ಕೆಎಸ್ಸಾರ್ಟಿಸಿ ನಿರ್ದೇಶ ನೀಡಿರುವುದರಿಂದ ಬದಲಿ ವ್ಯವಸ್ಥೆಯ ಮೂಲಕ ಬಸ್ ಸಂಚಾರ ಪುನರಾರಂಭಗೊಂಡಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ಗೆ ಹಣ ಪಾವತಿಸಲು ಬಾಕಿಯಿದ್ದ ಕಾರಣ ಇಂಧನ ಪೂರೈಕೆ ಸ್ಥಗಿತಗೊಳಿಸಿದ್ದು, ಇದರಿಂದ ಬಹುತೇಕ ಡಿಪೋಗಳಲ್ಲಿ ಬಸ್ ಸಂಚಾರ ಅರ್ಧಕ್ಕರ್ಧ ಸ್ಥಗಿತಗೊಳ್ಳಬೇಕಾಗಿ ಬಂದಿತ್ತು.
ಕೆಎಸ್ಸಾರ್ಟಿಸಿ ಬಸ್ಗಳಿಗೆ ಡಿಪೋಗಳಿಂದಲೇ ಇಂಧನ ತುಂಬಿಸಿಕೊಳ್ಳಬೇಕೆಂಬ ನಿಬಂಧನೆಯಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕೆಎಸ್ಸಾರ್ಟಿಸಿಗೆ ಇಂಧನ ಪೂರೈಸಿದ ಹಣ ಸಕಾಲಕ್ಕೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ರೀತಿ ಇಂಧನ ಪಡೆದುಕೊಂಡಿರುವ ನಿಟ್ಟಿನಲ್ಲಿ ಕಾಸರಗೋಡು ಡಿಪೋ ಒಂದರಲ್ಲೇ 50ಲಕ್ಷಕ್ಕೂ ಹೆಚ್ಚು ಮೊತ್ತ ನೀಡಲು ಬಾಕಿಯಿರಿಸಿಕೊಂಡಿದೆ. ಹೊರಗಿನಿಂದ ಇಂಧನ ತುಂಬಿಸಿಕೊಳ್ಳಲು ಅನುಮತಿ ಲಭಿಸುತ್ತಿದ್ದಂತೆ ಕೆಎಸ್ಸಾರ್ಟಿಸಿ ದೈನಂದಿನ ಗಳಿಕೆಯಿಂದ ಇಂಧನ ತುಂಬಿಸಿಕೊಳ್ಳಲಾರಂಭಿಸಿದೆ. ಇದುವರೆಗೆ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಇಂಧನ ತುಂಬಿಸಿಕೊಳ್ಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಗಳು ಖಾಸಗಿ ಪೆಟ್ರೋಲ್ ಪಂಪು ಮುಂದೆ ಸಾಲುಗಟ್ಟಿ ನಿಲ್ಲಲಾರಂಭಿಸಿದೆ.
ಖಾಸಗಿ ಪೆಟ್ರೋಲ್ ಪಂಪುಗಳಿಂದ ಇಂಧನ ಪಡೆದುಕೊಳ್ಳಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ಆಯಾ ಡಿಪೋಗಳಿಗೆ ನೀಡಿರುವ ಸೂಚನೆಯನ್ವಯ ಖಾಸಗಿ ಪಂಪುಗಳಿಂದ ಇಂಧನ ಪಡೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಎರಡು ಬಸ್ ಹೊರತುಪಡಿಸಿ ಇತರ ಎಲ್ಲ ಬಸ್ಗಳೂ ಸರ್ವೀಸ್ ಪುನರಾರಂಭಿಸಿರುವುದಾಗಿ ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಪಂಪುಗಳಿಂದ ಇಂಧನ ತುಂಬಲು ಸೂಚನೆ: ಕೆಎಸ್ಸಾರ್ಟಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
0
ಆಗಸ್ಟ್ 07, 2022
Tags