HEALTH TIPS

ಪೆಟ್ರೋಲ್, ಡೀಸೆಲ್ ದರ ಇಳಿಕೆ ಸದ್ಯಕ್ಕಿಲ್ಲ; ಇನ್ನಷ್ಟು ತಿಂಗಳು ಬೆಲೆ ಯಥಾಸ್ಥಿತಿ ಮುಂದುವರಿಕೆ ಸಾಧ್ಯತೆ

Top Post Ad

Click to join Samarasasudhi Official Whatsapp Group

Qries

             ವದೆಹಲಿ: ಪೆಟ್ರೋಲಿಯಂ ರಫ್ತು ದೇಶಗಳ ಸಂಸ್ಥೆ ಮತ್ತದರ ಮಿತ್ರ ದೇಶಗಳು (ಒಪೆಕ್ ಪ್ಲಸ್) ತೈಲೋತ್ಪಾದನೆಯನ್ನು ತೀವ್ರವಾಗಿ ಕಡಿತಗೊಳಿಸಲು ನಿರ್ಧರಿಸಿರುವುದರಿಂದ ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲಿ ಆರು ತಿಂಗಳಿಂದ ಜಾರಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಪರಿಷ್ಕರಣೆ ಸ್ಥಗಿತತೆ ಇನ್ನೂ ಮುಂದುವರಿಯುವ ಸಾಧ್ಯತೆಯಿದೆ.

              ಯೂಕ್ರೇನ್ ಯುದ್ಧಕ್ಕಿಂತ ಪೂರ್ವದ ಮಟ್ಟಕ್ಕೆ ಕುಸಿದಿರುವ ಇಂಧನ ಬೆಲೆಗಳಲ್ಲಿ ಚೇತರಿಕೆ ತರುವ ಉದ್ದೇಶದಿಂದ ಪ್ರತಿದಿನ 20 ಲಕ್ಷ ಬ್ಯಾರೆಲ್​ನಷ್ಟು ಉತ್ಪಾದನೆ ಕಡಿತ ಮಾಡಲು ಜಗತ್ತಿನ ಅಗ್ರ ಶ್ರೇಯಾಂಕದ ಕೆಲವು ತೈಲ ಉತ್ಪಾದನೆ ದೇಶಗಳು ಬುಧವಾರ ನಿರ್ಧರಿಸಿದ್ದವು. ಇದು ಭಾರತಕ್ಕೆ ಕೆಟ್ಟ ಸುದ್ದಿಯಾಗಿದೆ. ಯಾಕೆಂದರೆ ಇತ್ತೀಚಿನ ವಾರಗಳಲ್ಲಿ ತೈಲ ಬೆಲೆಗಳಲ್ಲಿ ಇಳಿಕೆಯಾದ್ದರಿಂದ ಇಂಧನ ಆಮದಿನ ವೆಚ್ಚವನ್ನು ಇಳಿಸಲು ಭಾರತಕ್ಕೆ ನೆರವಾಗಿತ್ತು. ಅಲ್ಲದೆ ಸರ್ಕಾರಿ ಸ್ವಾಮ್ಯದ ಚಿಲ್ಲರೆ ಮಾರಾಟ ಸಂಸ್ಥೆಗಳ ನಷ್ಟವನ್ನು ಸೀಮಿತಗೊಳಿಸಲೂ ಸಹಾಯಕವಾಗಿತ್ತು. ಒಪೆಕ್ ಪ್ಲಸ್​ನ ನಿರ್ಧಾರಕ್ಕೂ ಮುಂಚೆ ಡೀಸೆಲ್ ಮೇಲಿನ ನಷ್ಟ ಒಂದು ಲೀಟರ್​ಗೆ ಐದು ರೂಪಾಯಿ ಕಡಿಮೆಯಾಗಿತ್ತು.

              ಗಗನಮುಖಿಯಾದ ಹಣದುಬ್ಬರಕ್ಕೆ ಕಡಿವಾಣ ಹಾಕಲು ನೆರವಾಗುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿಸಿಎಲ್, ಎಚ್​ಪಿಸಿಎಲ್ ಇಂಧನ ಕಂಪನಿಗಳು ಕಳೆದ ಆರು ತಿಂಗಳಿಂದ ಚಿಲ್ಲರೆ ಮಾರಾಟ ದರದಲ್ಲಿ ಅಂತಾರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಬದಲಾವಣೆ ಮಾಡಿದ್ದವು.

                                     ಭಾರತದ ಬೆಳವಣಿಗೆ ಡೌನ್​ಗ್ರೇಡ್

             2022-23ನೇ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡ 6.5 ಆಗಬಹುದು ಎಂದು ವಿಶ್ವ ಬ್ಯಾಂಕ್ ಗುರುವಾರ ಅಂದಾಜು ಮಾಡಿದೆ. ಇದು 2022ರ ಜೂನ್ ಅಂದಾಜಿಗಿಂತ ಶೇಕಡ ಒಂದರಷ್ಟು ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಪರಿಸ್ಥಿತಿ ಹದಗೆಡುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಬ್ಯಾಂಕ್ ಹೇಳಿದೆ. ಏನಿದ್ದರೂ ಜಗತ್ತಿನ ಬೇರೆ ಭಾಗಗಳಿಗಿಂತ ಭಾರತ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಸೌತ್ ಏಷ್ಯಾ ಇಕನಾಮಿಕ್ ಫೋಕಸ್ ವರದಿಯಲ್ಲಿ ವಿಶ್ವ ಬ್ಯಾಂಕ್ ಸಮಾಧಾನ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವ ಬ್ಯಾಂಕ್​ನ ವಾರ್ಷಿಕ ಸಭೆಗೆ ಪೂರ್ವಭಾವಿಯಾಗಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತದ ಆರ್ಥಿಕತೆ ಕಳೆದ ವರ್ಷ ಶೇಕಡ 8.7 ಬೆಳವಣಿಗೆ ದಾಖಲಿಸಿತ್ತು. ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯ ಪ್ರದರ್ಶನ ಉತ್ತಮವಾಗಿದೆ. ಕೋವಿಡ್​ನ ಪ್ರಥಮ ಹಂತದಲ್ಲಿನ ತೀವ್ರ ಸಂಕೋಚನದ ನಂತರ ಉತ್ತಮವಾಗಿ ಸುಧಾರಿಸಿದೆ ಎಂದು ವಿಶ್ವ ಬ್ಯಾಂಕ್​ನ ದಕ್ಷಿಣ ಏಷ್ಯಾ ಕುರಿತ ಮುಖ್ಯ ಅರ್ಥಶಾಸ್ತ್ರಜ್ಞ ಹ್ಯಾನ್ಸ್ ಟಿಮ್ಮರ್ ಹೇಳಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries