ಬದಿಯಡ್ಕ: ವಿವಿಧ ಬೇಡಿಕೆಗಳ ಈಡೇರಿಕೆಯನ್ನು ಆಗ್ರಹಿಸಿ ಅಖಿಲ ಕೇರಳ ದಸ್ತಾವೇಜು ಬರಹಗಾರರು ಮತ್ತು ಸ್ಕ್ರೆಬ್ ಅಸೋಸಿಯೇಶನ್ ಬದಿಯಡ್ಕ ಘಟಕದ ನೇತೃತ್ವದಲ್ಲಿ ಒಂದು ದಿನದ ಧರಣಿ ಮುಷ್ಕರ ಬುಧವಾರ ನಡೆಯಿತು.
ಬದಿಯಡ್ಕ ಉಪನೊಂದಾವಣಾ ಕಚೇರಿಯ ಮುಂಭಾಗದಲ್ಲಿ ಬೆಳಗ್ಗೆ ಆರಂಭವಾದ ಪ್ರತಿಭಟನೆಯನ್ನು ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿದರು. ಸಂಘಟನೆಯ ಬದಿಯಡ್ಕ ಘಟಕಾಧ್ಯಕ್ಷ ದಿನೇಶ ಪ್ರಭು ಕರಿಂಬಿಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಬ್ಲಾಕ್ ಪಂಚಾಯಿತಿ ಸದಸ್ಯೆ ವಿದುಷಿಃ ಅಶ್ವಿನಿ ಭಟ್ ನೀರ್ಚಾಲು, ವಿವಿಧ ಪಕ್ಷಗಳ ಮುಖಂಡರಾದ ಜಗನ್ನಾಥ ಶೆಟ್ಟಿ, ಸುನಿಲ್ ಪಿ.ಆರ್. ಮಾಹಿನ್ ಕೇಳೋಟ್, ಸಿದ್ದೀಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿವೃತ್ತ ನೊಂದಾವಣಾಧಿಕಾರಿ ಮುಹಮ್ಮದ್ ಆಲಿ ಪೆರ್ಲ, ಘಟಕ ಕಾರ್ಯದರ್ಶಿ ನಾರಾಯಣಿ ಉಪಸ್ಥಿತರಿದ್ದರು.
ಪರಂಪರಾಗತವಾಗಿ ಬಂದ ಬರವಣಿಗೆ ಕೆಲಸವನ್ನು ಬರಹಗಾರರಿಗೇ ಮೀಸಲಿಡಬೇಕು, ಸರ್ಕಾರ ನಿಶ್ಚಯಿಸಿದ ಟೆಂಪ್ಲೇಟ್ ಪದ್ಧತಿಯನ್ನು ಕೈಬಿಡಬೇಕು, ಬರಹಗಾರರ ಕ್ಷೇಮನಿಧಿ ಮೊತ್ತ ಹೆಚ್ಚಿಸಬೇಕು, ಸದಸ್ಯತ್ವ ರದ್ದಾದ ಸದಸ್ಯರ ಸದಸ್ಯತನವನ್ನು ಮುಂದುವರಿಸಬೇಕು, ದಸ್ತಾವೇಜುಗಳ ಅಂಡರ್ ವೇಲ್ಯೂವೇಶನ್ ನಿಯಮವನ್ನು ಕೈಬಿಡಬೇಕು, ಪೈಲಿಂಗ್ ಶೀಟ್ಗಳನ್ನು ಸಮರ್ಪಕವಾಗಿ ಕಚೇರಿಯಿಂದಲೇ ವಿತರಿಸಬೇಕು, ಬರಹಗಾರರ ಫೀಸ್ ಪರಿಷ್ಕರಿಸಬೇಕು, ನೊಂದಾವಣಾ ಕಚೇರಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಡಲಾಯಿತು. ಘಟಕದ ರಾಜ್ಯ ಸಮಿತಿ ಸದಸ್ಯ ಬಿ.ಲಕ್ಷ್ಮಣ ಪ್ರಭು ಕರಿಂಬಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.