ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ಆವರಣಗೋಡೆಯಿಲ್ಲದ ಬಾವಿಗೆ ಬಿದ್ದ ವೈದ್ಯರನ್ನು ರಕ್ಷಿಸಲು ಇಳಿದ ಇಬ್ಬರು ಸ್ಥಳೀಯ ನಿವಾಸಿಗಳೂ ಸಿಲುಕಿಕೊಂಡಿದ್ದು, ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೂರೂ ಮಂದಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಪೇಟೆಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ ಪ್ರದೀಪ್ ಕುಮಾರ್ ಕ್ಲಿನಿಕ್ ಸನಿಹದ ಆವರಣಗೋಡೆಯಿಲ್ಲದ ಸುಮಾರು 35ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದಿದ್ದರು. ಇದನ್ನು ನೋಡಿದ ಸ್ಥಳೀಯರು ನೀಡಿದ ಮಾಹಿತಿಯನ್ವಯ ಸ್ಥಳದಲ್ಲಿದ್ದ ರಾಮನಾಯ್ಕ್ ಹಾಗೂ ಅನಿಲ್ ಎಂಬವರು ಬಾವಿಗಿಳಿದು ವೈದ್ಯರನ್ನು ರಕ್ಷಿಸಿ ಮೇಲಕ್ಕೆತ್ತಲು ಯತ್ನಿಸಿದರೂ, ಏರಲಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಕಾಸರಗೋಡು ಅಗ್ನಿಶಾಮಕ ದಳ ಸ್ಟೇಶನ್ ಅಧಿಕಾರಿ ಪ್ರಕಾಶ್ ಕುಮಾರ್ ನೇತೃತ್ವದ ಸಿಬ್ಬಂದಿಯ ತಂಡ ಬಾವಿಗಿಳಿದು ಮೂರೂ ಮಂದಿಯನ್ನು ರಕ್ಷಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಸಹಕರಿಸಿದರು. ಕಾರ್ಯಾಚರಣೆ ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದ್ದರು.