ನವದೆಹಲಿ: ಶಿವಮೊಗ್ಗ ಮೂಲದ ಭಯೋತ್ಪಾದಕ ಸಂಚುಗಾರ ಅರಾಫತ್ ಅಲಿ ಎಂಬಾತನನ್ನು ಎನ್ಐಎ ಪೊಲೀಸರು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ನೈರೋಬಿಯಾದಿಂದ ದೆಹಲಿಗೆ ಆಗಮಿಸಿದ್ದ ತೀರ್ಥಹಳ್ಳಿ ಮೂಲದ ಅರಾಫತ್ ಅಲಿ ಬಂಧಿತ ಆರೋಪಿಯಾಗಿದ್ದಾನೆ. ಈತ ನೇರವಾಗಿ ಎಲ್ಲಿಯೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಆದರೆ, ಉಗ್ರ ಚಟುವಟಿಕೆಗಳಿಗೆ ವಿದೇಶಗಳಲ್ಲಿಯೇ ಕುಳಿತು ಹಣದ ವ್ಯವಸ್ಥೆ ಮಾಡುತ್ತಿದ್ದ. 2020ರಲ್ಲಿ ಕರ್ನಾಟಕದ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮತೀನ್ ಜೊತೆಗೆ ಅರಾಫತ್ ಅಲಿ ದೇಶ ಬಿಟ್ಟು ಹೋಗಿದ್ದನು.
ಅರಾಫತ್ ಅಲಿ ವಿದೇಶದಿಂದ ಕೆಲಸ ಮಾಡುತ್ತಿದ್ದು ಮುಸ್ಲಿಂ ಯುವಕರನ್ನು ಗುರುತಿಸುವುದು, ಆಮೂಲಾಗ್ರಗೊಳಿಸುವುದು ಮತ್ತು ಐಎಸ್ಗೆ ಸೇರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನು.
ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣದ ಭಾಗವಾಗಿ ಮೊಹಮ್ಮದ್ ಶಾರಿಕ್ ಎಂಬ ಆರೋಪಿ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಐಇಡಿ ಅಳವಡಿಸಲು ತೆರಳುತ್ತಿದ್ದನು. ಆದರೆ, ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಐಇಡಿ ಸ್ಫೋಟಗೊಂಡಿತ್ತು.