ಬದಿಯಡ್ಕ: ಕೃಷಿಕರ ಅಡಿಕೆಗೆ ಉತ್ತಮ ಮಾರುಕಟ್ಟೆ ದೊರಕಬೇಕು, ವ್ಯಾಪಾರಿಗಳಿಗೆ ಉತ್ತಮ ಅಡಿಕೆಯೂ ಒಂದೇಕಡೆಯಲ್ಲಿ ಲಭಿಸಬೇಕು ಎನ್ನುವ ಉದ್ದೇಶದೊಂದಿಗೆ ನೀರ್ಚಾಲಿನಲ್ಲಿ ಕಾರ್ಯಾಚರಿಸುತ್ತಿರುವ ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘದ ನೇತೃತ್ವದಲ್ಲಿ ಅಡಿಕೆ ಖರೀದಿ ಮಾರಾಟಕ್ಕೆ ಟೆಂಡರ್ ವ್ಯವಸ್ಥೆಗೆ ಶನಿವಾರ ಚಾಲನೆನೀಡಲಾಯಿತು. ಕೃಷಿಕರು ತಮ್ಮ ಅಡಿಕೆಯೊಂದಿಗೆ ಬೆಳಗ್ಗಿನಿಂದಲೇ ಆಗಮಿಸಿ ವಿನೂತನ ವ್ಯವಸ್ಥೆಯ ಬಗ್ಗೆ ಉತ್ತಮ ನಿರೀಕ್ಷೆಯಲ್ಲಿದ್ದರು.
ಉದ್ಘಾಟನಾ ಕಾರ್ಯಕ್ರಮ :
ಕ್ಯಾಂಪ್ಕೋ ಸಂಸ್ಥೆಯ ಉಪಾ`À್ಯಕ್ಷ ಶಂಕರನಾರಾಯಣ ಖಂಡಿಗೆ ದೀಪಬೆಳಗಿಸಿ ಚಾಲನೆಯನ್ನು ನೀಡಿ ಮಾತನಾಡಿ ಕ್ಯಾಂಪ್ಕೋ ಹಾಗೂ ನೀರ್ಚಾಲಿನ ಈ ಕೃಷಿಕರ ಸಂಸ್ಥೆಯು ಹಿಂದಿನಿಂದಲೇ ಅನ್ಯೋನ್ಯವಾಗಿದ್ದು, ಕೃಷಿಕರ ಏಳಿಗೆಯನ್ನು ಬಯಸಿ ಮುನ್ನಡೆಯುವತ್ತಿರುವ ಸಂಸ್ಥೆಯಾಗಿದೆ. ಪ್ರಸ್ತುತ ದಿಟ್ಟ ಹೆಜ್ಜೆಯ ಮೂಲಕ ಕೃಷಿಕರ ಬೆನ್ನೆಲುಬಾಗಿ ನಿಂತಿದೆ. ಅಡಿಕೆಗೆ ಟೆಂಡರ್ ಎಂಬ ಕಾರ್ಯವು ಕೃಷಿಕರಿಗೂ ವ್ಯಾಪಾರಿಗಳಿಗೂ ನೆರವಾಗಲಿ ಎಂದು ಹಾರೈಸಿದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಅಡಿಕೆಯ ಗುಣಮಟ್ಟವನ್ನು ಪರಿಶೀಲಿಸುವ ಮೂಲಕ ವ್ಯವಸ್ಥೆಗೆ ಚಾಲನೆಯನ್ನು ನೀಡಿ ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಸಹಜವಾಗಿದ್ದು, ಸಹಕಾರ್ ಸೆ ಸಮೃದ್ಧಿ ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಆರ್ಥಿಕ ಸ್ಥಿತಿಯನ್ನು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಯೋಜನೆಯನ್ನು ಹಮ್ಮಿಕೊಂಡಿದೆ. ಬದಲಾವಣೆಯ ಮೂಲಕ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರಲು ನಿರಂತರ ಶ್ರಮ ನಡೆಯುತ್ತಿದೆ. ಸಹಕಾರಿ ವರ್ಗ, ವ್ಯಾಪಾರಸ್ಥರು, ಕೃಷಿಕರು ಸಮ್ಮಿಳಿತಗೊಂಡರೆ ಪಾರದರ್ಶಕ ವ್ಯವಸ್ಥೆಯನ್ನು ಸದೃಢಗೊಳಿಸಲು ಸಾಧ್ಯವಿದೆ ಎಂದರು.
ಶಂಕರನಾರಾಯಣ ಭಟ್ ಕಿದೂರು, ಕೋಳಾರು ಸತೀಶ್ಚಂದ್ರ ಭಂಡಾರಿ, ನಾರಾಯಣ ಭಟ್, ಬಾಬು ಅಗಸ, ಸುರೇಶ್ ಕುಮಾರ್ ಶೆಟ್ಟಿ, ಡಾ. ಜಯಪ್ರಕಾಶ್ ನಾರಾಯಣ, ಕ್ಯಾಂಪ್ಕೋ ಎಜಿಎಂ ಗೋವಿಂದ ಭಟ್, ಗಿರೀಶ್ ಕಾನತ್ತೂರು, ಅಡಿಕೆ ಕೃಷಿಕರು, ವ್ಯಾಪಾರಸ್ಥರು, ಕ್ಯಾಂಪ್ಕೋ ಸಂಸ್ಥೆಯ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು. ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘ ನೀರ್ಚಾಲು ಇದರ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಕಾರ್ಯಕ್ರಮ ನಿರೂಪಣೆಗೈದು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್. ವಂದಿಸಿದರು.