ಕುಂಬಳೆ: ದರ್ಬಾರುಕಟ್ಟೆ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಸಂಭ್ರಮದಿಂದ ನಡೆಯುತ್ತಿದ್ದು ಶುಕ್ರವಾರ ಬೆಳಗ್ಗೆ ಅಶ್ವಿನಿ ರಾಜ್ ಪಟ್ಟಾಜೆ, ಶ್ರೀದುರ್ಗಾಸಂಗೀತಶಾಲೆ ಬದಿಯಡ್ಕ ಇವರಿಂದ ಸಂಗೀತಾರ್ಚನೆ ನಡೆಯಿತು. ಸಂಗೀತಾಭ್ಯಾಸದ ವಿದ್ಯಾರ್ಥಿಗಳು ತಮ್ಮ ಗಾಯನದ ಮೂಲಕ ಗಮನಸೆಳೆದರು. ಮೃದಂಗದಲ್ಲಿ ಕೌಶಿಕ್ ರಾಮಕೃಷ್ಣ ಸೀತಾಂಗೋಳಿ ಹಾಗೂ ವಯಲಿನ್ನಲ್ಲಿ ಜಗದೀಶ್ ಕೊರೆಕ್ಕಾನ ಜೊತೆಗೂಡಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಅಪರಾಹ್ನ ಶ್ರೀ ಸತ್ಯಸಾಯಿ ಸೇವಾಸಮಿತಿ ಶಿರಿಯ ಇವರಿಂದ ಭಜನೆ, ರಾತ್ರಿ ಶ್ರೀದೇವರಿಗೆ ವಿಶೇಷ ಕಾರ್ತಿಕಪೂಜೆ, ಅಲಂಕಾರ ಪೂಜೆ ಜರಗಿತು. ನಂತರ ವಿಠ್ಠಲ್ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ವಿಶೇಷಕಾರ್ಯಕ್ರಮ ಕೆ.ಕೆ.ಶೆಟ್ಟಿ, ವಿನಯ ಕೆ.ಕೆ.ಶೆಟ್ಟಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ಜರಗಿತು.
ಶನಿವಾರ ಬೆಳಿಗ್ಗೆ ಶ್ರೀರಾಜರಾಜೇಶ್ವರಿ ಭಜನಾ ಸಂಘ ಮುಂಡಪಳ್ಳ ಇವರ ಪ್ರಾಯೋಜಕತ್ವದಲ್ಲಿ ಶ್ರೀ ವಾಸುದೇವ ತಂತ್ರಿಗಳವರಿಂದ ಸಂಗೀತಾರ್ಚನೆ, ಮಧ್ಯಾಹ್ನ ಯಕ್ಷವಿಹಾರಿ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ದುರ್ಗಾಪೂಜೆ ನಡೆಯಿತು. ರಾತ್ರಿ 8.15ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನಗೊಂಡಿತು.