ಕಾಸರಗೋಡು: ಜಿಲ್ಲಾದ್ಯಂತ ಬುಧವಾರ ತುಂತುರು ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿಗೆ ತೊಡಕಾಗಿ ಪರಿಣಮಿಸಿತು. ತಲಪ್ಪಾಡಿಯಿಂದ ಚೆರ್ಕಳ ವರೆಗಿನ ಆರಂಭದ ರೀಚ್ನ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮಳೆಗೆ ಕಾಮಗಾರಿ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕೆಲವೆಡೆ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳ ಚಕ್ರ ಮಣ್ಣಿನಡಿ ಸಿಲುಕಿಕೊಂಡು ಚಾಲಕರು ಪರದಾಡಬೇಕಾಯಿತು.
ರಸ್ತೆಸಂಪೂರ್ಣ ಕೆಸರುಮಯವಾಗಿದ್ದು, ಟ್ರಾಫಿಕ್ ಜಾಮ್ಗೂ ಕಾರಣವಾಯಿತು. ಮೇಲ್ಸೇತುವೆ ಕಾಂಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಮಂಗಳವಾರ ಸಂಜೆಯಿಂದಲೇ ಮೋಡಕವಿದ ವಾತಾವರಣದೊಂದಿಗೆ ಬುಧವಾರ ಸಂಜೆವರೆಗೂ ಹನಿಮಳೆ ಮುಂದುವರಿದಿತ್ತು. ಇನ್ನು ಅಡಕೆ ಕೃಷಿಕರೂ ಸಮಸ್ಯೆ ಎದುರಿಸುವಂತಾಗಿತ್ತು. ಏಕಾಏಕಿ ಮಳೆ ಹನಿಯಲಾರಂಭಿಸುತ್ತಿದ್ದಂತೆ ಒಣಗಿದ ಅಡಕೆಯನ್ನು ಅಂಗಳದಿಂದ ಸಂಗ್ರಹಿಸಿ ತೆಗೆಯುವುದೂ ಸಮಸ್ಯೆಯಾಗಿತ್ತು.