ಕಾಸರಗೋಡು: ರೈಲ್ವೇ ಹಳಿಗಳನ್ನು ಅಕ್ರಮವಾಗಿ ದಾಟುವುದು ಹಾಗೂ ರೈಲ್ವೆ ಹಳಿಗಳ ಮೇಲಿಂದ ದ್ವಿಚಕ್ರ ವಾಹನಗಳನ್ನು ಅಡ್ಡ ದಾಟಿಸುತ್ತಿರುವುದರಿಂದ ಉಂಟಾಗಿರುವ ದುರಂತಗಳ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಹೊಸ ವರ್ಷದ ಹಿಂದಿನ ದಿನದಂದು, ಕೋಯಿಕ್ಕೋಡ್ ಬಳಿಯ ವೆಲ್ಲಯಿಲ್ ನಿಲ್ದಾಣದಲ್ಲಿ ರೈಲ್ವೇ ಹಳಿಯ ಮೇಲಿಂದ ಸ್ಕೂಟರ್ ಚಲಾಯಿಸುತ್ತಿದ್ದಾಗ 12224 ನಂಬರಿನ ತುರಂತೋ ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದರೆ, ಇನ್ನೊಂದು ಪ್ರಕರಣದಲ್ಲಿ ಜಾನುವಾರುಗಳನ್ನು ರೈಲ್ವೆ ಹಳಿ ಮೇಲೆ ಓಡಡಲು ಬಿಟ್ಟ ಪರಿಣಾಮ ನಿಲಂಬೂರಿನಿಮದ ಪಾಲಕ್ಕಾಡಿಗೆ ತೆರಳುತ್ತಿದ್ದ 06464 ನಂಬರ್ನ ವಿಶೇಷ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿತ್ತು. ರೈಲ್ವೆ ಹಳಿ ಬಗ್ಗೆ ಸಾರ್ವಜನಿಕರಲ್ಲಿ ಇರುವ ಮಾಹಿತಿ ಕೊರತೆಯಿಂದ ಇಂತಹ ದುರಂತಗಳು ಸಂಭವಿಸುತ್ತಿದೆ. ಇಂತಹ ಕೃತ್ಯಗಳು ರೈಲು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವುದರ ಜತೆಗೆ ರೈಲು ಮತ್ತು ರೈಲ್ವೆ ಆಸ್ತಿಗಳಿಗೆ ಭಾರೀ ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದ, ಈ ನಿಟ್ಟಿನಲ್ಲಿ ಸಾರ್ವಜನಿಕರು ಜಾಗ್ರತೆ ಪಾಲಿಸುವಂತೆ ರೈಲ್ವೆ ಪಾಲಕ್ಕಾಡ್ ವಿಭಾಗೀಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.