ಕಾಸರಗೋಡು: ಸರ್ಕಾರಿ ಕಚೇರಿಗಳಲ್ಲಿನ ಮಾಹಿತಿಯನ್ನು ಜನರಿಗೆ ಸಕಾಲಕ್ಕೆ ಲಭ್ಯವಾಗಿಸುವಲ್ಲಿ ಕೆಲವು ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗ ಆಯುಕ್ತ ಎ. ಅಬ್ದುಲ್ ಹಕೀಂ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗನದಲ್ಲಿ ಆರ್ಟಿಐ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕೈಯಲ್ಲಿ ಮಾಹಿತಿ ಇದ್ದರೂ ಅದನ್ನು ನೀಡಲು ಹಿಂದೇಟು ಹಾಕುವ ಪ್ರವೃತ್ತಿ ರಾಜ್ಯದ ಕೆಲವೊಂದು ಇಲಾಖೆಗಳಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದೆ. ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸುವ ಆರ್ಟಿಐ ಅರ್ಜಿಗಳನ್ನು ಕೆಲವು ಅಧಿಕಾರಿಗಳು ವಿಲೇವಾರಿ ಮಾಡುವಲ್ಲಿ ವಿಳಂಬವುಂಟುಮಾಡುವುದನ್ನು ಆಯೋಗ ಸಹಿಸದು. ಆರ್ಟಿಐ ಹೆಸರಲ್ಲಿ ಕೆಲವು ಕಾರ್ಯಕರ್ತರು ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನವನ್ನೂ ನಡೆಸುತ್ತಿದ್ದು, ಮಾಹಿತಿ ಪಡೆಯುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕ ದ್ವೇಷ ಸಾಧನೆಗೂ ಯತ್ನಿಸುತ್ತಿರುವುದನ್ನೂ ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.
ಮಾಹಿತಿ ನೀಡದಿದ್ದಲ್ಲಿ ದಂಡ:
ಮಾಹಿತಿಯು ಕೈಯಲ್ಲಿದ್ದರೂ ಅರ್ಜಿದಾರರಿಗೆ ನೀಡುವಲ್ಲಿ ಲೋಪವುಂಟಾದಲ್ಲಿ ಅಂತಹ ಅಧಿಕಾರಿಗಳಿಗೆ 25000 ರೂ. ದಂಡ ವಿಧಿಸಲಾಗುವುದು ಮತ್ತು ವಿಭಾಗದ ಮುಖ್ಯಸ್ಥರು ಕಾನೂನು ಕ್ರಮಕ್ಕೆ ಒಳಪಡಬೇಕಾದೀತು. ಸಕಾಲದಲ್ಲಿ ಮಾಹಿತಿ ನೀಡಲು ವಿಫಲವಾದಲ್ಲಿ ಹಾಗೂ ಇದರಿಂದ ಅರ್ಜಿದಾರರು ಯಾವುದೇ ನಷ್ಟವನ್ನು ಅನುಭವಿಸಿದ್ದರೆ, ಆಯೋಗವು ನಿರ್ಧರಿಸಿದಂತೆ ಪರಿಹಾರವನ್ನೂ ಪಾವತಿಸಬೇಕಾಗುತ್ತದೆ.
ಆರ್ಟಿಐ ಅರ್ಜಿಗಳನ್ನು ಸ್ವೀಕರಿಸಿದ ಐದು ದಿನಗಳಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಬೇಕು. ಕಡತವನ್ನು ಬೇರೆ ಇಲಾಖೆ ಅಥವಾ ಕಚೇರಿಗಳಿಗೆ ಕಳುಹಿಸಬೇಕಾದರೆ ಕಳುಹಿಸಿಕೊಡಬೇಕು. ಉಚಿತವಾಗಿ ಮಾಹಿತಿ ನೀಡಲು ಸಾಧ್ಯವಾಗದಿದ್ದಲ್ಲಿ ಅರ್ಜಿದಾರರಿಗೆ ಹಣ ಪಾವತಿಸಲು ತಿಳಿಸಬೇಕು ಹಾಗೂ 30 ದಿನಗಳ ಮೊದಲು ಶುಲ್ಕವನ್ನು ವಸೂಲಿ ಮಾಡಿ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.