ಪತ್ತನಂತಿಟ್ಟ: ಶಬರಿಮಲೆ ಮಂಡಲ-ಮಕರ ಬೆಳಕು ಉತ್ಸವ ಋತುವಿನ ಯಶಸ್ಸು ಇಲಾಖೆಗಳ ಸಮನ್ವಯದ ಫಲವಾಗಿದೆ ಎಂದು ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಲಾಖೆಗಳ ಸಹಭಾಗಿತ್ವ ಮತ್ತು ನಾಯಕತ್ವವು ಯಾತ್ರೆಯನ್ನು ಉತ್ತಮಗೊಳಿಸಿತು. ಉತ್ಸವದ ವೇಳೆ ಕೆಲ ಕೇಂದ್ರಗಳಿಂದ ಹುಸಿ ಪ್ರಚಾರ ಮಾಡಿ ಶಬರಿಮಲೆಯ ಮಹತ್ವಿಕೆಯನ್ನು ಧ್ವಂಸ ಮಾಡಲು ಉದ್ದೇಶಪೂರ್ವಕವಾಗಿ ಯತ್ನಿಸಿದ್ದರು. ಇದು ಕೂಡದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಅಪಪ್ರಚಾರ ಹಾಗೂ ಸಮಸ್ಯೆಗಳನ್ನು ಹೋಗಲಾಡಿಸಲು ವಿವಿಧ ಇಲಾಖೆಗಳ ಮಧ್ಯಸ್ಥಿಕೆ ಸಹಕಾರಿಯಾಗಿದ್ದು, ಮುಂದಿನ ಉತ್ಸವಗಳನ್ನು ಉತ್ತಮ ಪಡಿಸಲು ಇದನ್ನೇ ಉದಾಹರಣೆಯಾಗಿಸಿಕೊಳ್ಳಬೇಕು ಎಂದರು. ಪಂಬಾ ಶ್ರೀರಾಮಸಾಕೇತಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಬರಿಮಲೆ ಯಾತ್ರೆ ಹಲವು ವಿವಾದಗಳಿಗೆ ಮತ್ತು ಸಂಕಷ್ಟಗಳಿಗೆ ಸಾಕ್ಷಿಯಾಯಿತು. ಅನೇಕ ಭಕ್ತರು ಕಣ್ಣೀರು ಸುರಿಸುತ್ತಾ ಹಿಂದಿರುಗಿದರು. ಗಂಟೆಗಟ್ಟಲೆ ಹೆಣಗಾಡಿದ ಸಾವಿರಾರು ಜನರು ಸುಸ್ತಾಗಿದ್ದರು. ಚೆಕ್ ಪೋಸ್ಟ್ಗಳಲ್ಲಿ ಯಾತ್ರಾರ್ಥಿಗಳ ವಾಹನಗಳನ್ನು ತಡೆದು ಪ್ರತಿಭಟನೆಗೆ ಕಾರಣವಾಯಿತು. ಟ್ರಾಫಿಕ್ ನಿಯಂತ್ರಿಸುವಲ್ಲಿ ಸÀರ್ಕಾರ ಹಾಗೂ ಪೋಲೀಸರು ವಿಫಲರಾಗಿದ್ದರು. ಅಯ್ಯಪ್ಪ ಸೇವಾ ಸಂಗಮದಂತಹ ಸಂಸ್ಥೆಗಳು ಜನಸಂದಣಿಯನ್ನು ನಿರ್ವಹಿಸುವುದನ್ನು ಮತ್ತು ಭಕ್ತರಿಗೆ ಸಹಾಯ ಮಾಡುವುದನ್ನು ನಿಷೇಧಿಸಲಾಗಿತ್ತು.
ಈ ಸಮಸ್ಯೆ ಬಗೆಹರಿಸಲು ರಜೆಯ ದಿನವೂ ಹೈಕೋರ್ಟ್ ವಿಶೇಷ ಕಲಾಪ ನಡೆಸಿತು. ಸನ್ನಿಧಾನಕ್ಕೆ ಭೇಟಿ ನೀಡದೆ ಹಲವರು ಅರ್ಧ ದಾರಿಯಲ್ಲಿ ವಾಪಸಾಗಿದ್ದಕ್ಕೆ ಕೇರಳವೂ ಸಾಕ್ಷಿಯಾಯಿತು. ಬಹುತೇಕ ಭಕ್ತರು ಸರ್ಕಾರವನ್ನು ದೂಷಿಸಿ ಇನ್ನು ಮುಂದೆ ಮಾಲಧಾರಿಗಳಾಗಿ ಶಬರಿಮಲೆಗೆ ಬರುವುದಿಲ್ಲ ಎಂದು ನೋವಿನಿಂದ ವಾಪಸು ತೆರಳಿದ್ದರು. ಮಕರ ಬೆಳಕು ಮಹೋತ್ಸವದಿಂದ ಎಲ್ಲರೂ ಎಲ್ಲವನ್ನೂ ಮರೆತಂತೆ ದೇವಸ್ವಂ ಸಚಿವರ ಮಾತು ಇದೀಗ ಅಚ್ಚರಿ ಮೂಡಿಸಿದೆ. ಟ್ರಾಫಿಕ್ ನಿಯಂತ್ರಿಸುವಲ್ಲಿ ಲೋಪವಾಗಿದೆ ಎಂದು ದೇವಸ್ವಂ ಅಧ್ಯಕ್ಷರು ಸೇರಿದಂತೆ ಜನರು ಒಪ್ಪಿಕೊಂಡಿದ್ದರು. ಇದೆಲ್ಲವನ್ನೂ ಗಾಳಿಗೆ ತೂರಿ ಜನರ ಕಣ್ಣಿಗೆ ಮಣ್ಣು ಎರಚಲು ಸಚಿವರು ಯತ್ನಿಸಿರುವರು.