ತಿರುವನಂತಪುರಂ: ಕೇರಳ ವಿಧಾನಸಭೆಯ ಸಂಪೂರ್ಣ ಬಜೆಟ್ ಅಧಿವೇಶನ ಜೂ. 10ರಿಂದ ಆರಂಭಗೊಳ್ಳಲಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕಐಗೊಳ್ಳಲಾಯಿತು. ಜೂ. 10ರಿಂದ 12ರ ವರೆಗೆ ಮೊದಲ ಹಂತದ ಅಧಿವೇಶನ ನಡೆಯಲಿದ್ದು, 13ರಿಂದ 15ರ ವರೆಗೆ ವಿಧಾನಸಭಾ ಸಮುಚ್ಛಯದ ಶಂಕರನಾರಾಯಣನ್ ತಂಬಿ ಸಭಾಂಗಣದಲ್ಲಿ ವಿಶ್ವ ಕೇರಳ ಸಭೆ ನಡೆಯುವುದು. ಅನಂತರ ಬಕ್ರೀದ್ ಹಬ್ಬ ಕಳೆದು ಜೂ. 19ರಂದು ಅಧಿವೇಶನ ಪುನರಾರಂಭಗೊಳ್ಳಲಿದೆ.
ಅಧಿವೇಶನದಲ್ಲಿ ವಇತ್ತೀಯ ವಿಷಯದ ಬಗ್ಗೆ ಚರ್ಚೆ ನಡೆಸಲು 13ದಿವಸಗಳನ್ನು ಮೀಸಲಿರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡುಗಳ ಪುನ:ವಿಂಗಡಣೆ ಬಗ್ಗೆ ನಿರ್ಣಯ ಹಾಗೂ ಹೆಚ್ಚುವರಿ ವಾರ್ಡುಗಳ ರಚನೆ ಕುರಿತಾದ ಮಸೂದೆ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಇನ್ನೂ ಹಲವು ಮಸೂದೆಗಳ ಮಂಡನೆ ನಡೆಯಲಿದೆ. ಕೇರಳದ ಸಿಪಿಎಂ ಮುಖಂಡ ಎಳಮರ ಕರೀಂ, ಸಿಪಿಐ ಮುಖಂಡ ಬಿನೋಯ್ ವಿಶ್ವಂ ಮತ್ತು ಕೇರಳ ಕಾಂಗ್ರೆಸ್(ಎಂ)ನ ಜೋಸ್ ಕೆ. ಮಾಣಿ ಅವರ ರಾಜ್ಯಸಭಾ ಸದಸ್ಯತನ ಜುಲೈ 1ರಂದು ಪೂರ್ತಿಗೊಳ್ಳಲಿದ್ದು, ತೆರವಾಗಲಿರುವ ಈ ಮೂರೂ ಸ್ಥಾನಗಳಿಗೆ ವಿಧಾನಸಭಾ ಅಧಿವೇಶನದ ಕಾಲಾವಧಿಯಲ್ಲೇ ಚುನಾವಣೆ ನಡೆಯಲಿದೆ. ಜುಲೈ 25ರ ವರೆಗೆ ಕೇರಳ ವಿಧಾನಸಭಾ ಅಧಿವೇಶನ ನಡೆಯಲಿದೆ.