ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿ ವಾಹಿನಿಯ ನೇತೃತ್ವದಲ್ಲಿ ನೀರ್ಚಾಲು ಶ್ರೀಸದನದಲ್ಲಿ ವಿದ್ಯಾರ್ಥಿಗಳಿಗಾಗಿ ಜರಗಿದ ಜೀವನಬೋಧೆ ಶಿಬಿರ 2024 ವಿಶಿಷ್ಟವಾಗಿ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಮಾತನಾಡಿ ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳನ್ನೂ ಜೀವನದಲ್ಲಿ ಅಳವಡಿಸಿಕೊಂಡಾಗ ಅವರು ವಿಕಾಸವನ್ನು ಹೊಂದುತ್ತಾರೆ. ಎಲ್ಲರೊಂದಿಗೆ ಬೆರೆಯುವ ಅವಕಾಶವನ್ನು ಅವರಿಗೆ ನೀಡುವುದು ಪ್ರತಿಯೋರ್ವ ಹೆತ್ತವರ ಕರ್ತವ್ಯವಾಗಿದೆ. ನಾನು ನನ್ನ ಸಂಸಾರ ಎಂಬ ಚಿಂತನೆಯನ್ನು ದೂರವಿಟ್ಟು ಎಲ್ಲರೊಂದಿಗೆ ಬೆರೆಯಲು ಅವರನ್ನು ಬಿಡಬೇಕು. ಶ್ರೀಮಠದ ಹಲವಾರು ಯೋಜನೆಗಳೊಂದಿಗೆ ಎಲ್ಲರೂ ಕೈಜೋಡಿಸಬೇಕು. ಶಿಬಿರಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಜ್ಞಾನವು ಅನಾವರಣಗೊಳ್ಳುವುದು ಎಂದರು.
ಪ್ರೇರಣಾ ತಂಡದ ನೇತೃತ್ವದಲ್ಲಿ ವಿವಿಧ ಚಟುವಟಿಕೆಗಳು ನಡೆಯಿತು. ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಡಾ.ವೈ.ವಿ.ಕೃಷ್ಣಮೂರ್ತಿ, ವಿದ್ಯಾರ್ಥಿವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ, ನವನೀತಪ್ರಿಯ ಕೈಪಂಗಳ, ಮಹಾಮಂಡಲ ಯುವಪ್ರಧಾನ ಕೇಶವಪ್ರಕಾಶ ಮುಣ್ಚಿಕ್ಕಾನ, ಮಾತೃತ್ವಂನ ಈಶ್ವರಿ ಬೇರ್ಕಡವು, ಶ್ರೀಮಠದ ಗುರಿಕ್ಕಾರರು, ವಿವಿಧ ವಲಯಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕೇಶವಪ್ರಕಾಶ ಎಡೆಕ್ಕಾನ ವಂದಿಸಿದರು.
ಮೂರುದಿನಗಳ ಕಾಲ ತಮ್ಮ ಮನೆ `ಶ್ರೀಸದನ'ದಲ್ಲಿ ಶಿಬಿರಕ್ಕೆ ಅವಕಾಶವನ್ನು ನೀಡಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್, ಅಧ್ಯಾಪಿಕೆ ಶೈಲಜಾ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸತ್ಯನಾರಾಯಣ ಭಟ್ ಪಂಜಿತ್ತಡ್ಕ, ಗೋವಿಂದ ಭಟ್ ಬಳ್ಳಮೂಲೆ ನೇತೃತ್ವದಲ್ಲಿ ಶಿಬಿರಾಗ್ನಿ ಜರಗಿತು.