ಕಾಸರಗೋಡು: ಜಿಲ್ಲೆ ರಚನೆಯ 40ನೇ ವರ್ಷಾಚರಣೆಯ ಜಿಲ್ಲ ಮಟ್ಟದ ಉದ್ಘಾಟನೆ ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಸಿ ನೆಡುವ ಮೂಲಕ ವರ್ಷಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಎಲ್ಲ ಇಲಾಖೆಗಳ ವಿವಿಧ ಕಲ್ಯಾಣ ಸೇವೆಗಳನ್ನು ಜನಸಾಮಾನ್ಯರಿಗೆ ಲಭ್ಯವಾಘಿಸುವಂತೆ ಮಾಡುವುದು ಜಿಲ್ಲಾಡಳಿತದ ಪ್ರಥಮ ಆದ್ಯತೆಯಾಗಿದೆ. ಅದಕ್ಕಾಗಿ ಎಲ್ಲ ಇಲಾಖೆ ಸಿಬ್ಬಂದಿ ಶ್ರಮಿಸಬೇಕಾದ ಅನಿವಾರ್ಯತೆಯಿದೆ. ಜಿಲ್ಲೆ ರಚನೆಯಾಗಿ ನಾಲ್ಕು ದಶಕಗಳು ಕಳೆದರೂ ಕಾಸರಗೋಡು ಜಿಲ್ಲೆಯಿಂದ ಸರ್ಕಾರಿ ನೌಕರರ ಕೊರತೆ ಕಾಡುತ್ತಿದೆ. ಇದರಿಂದ ನಿಗದಿತ ಪ್ರಗತಿ ಸಾಧ್ಯವಾಗದ ಸ್ಥಿತಿಯಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಎ.ಶಜ್ನಾ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂಧನ್, ನೆಹರು ಯುವ ಕೇಂದ್ರದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಪಿ.ಅಖಿಲ್, ಸಹಾಯಕ ಮಾಹಿತಿ ಅಧಿಕಾರಿ ಎ.ಪಿ.ದಿಲ್ನಾ ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಿವಿಲ್ ಸಟೇಶನ್ ವಠಾರದಲ್ಲಿ ನಲ್ವತ್ತು ಸಸಿಗಳನ್ನು ನೆಡುವ ಮೂಲಕ ಜಿಲ್ಲೆಯ ನಲವತ್ತನೇ ವರ್ಷಾಚರಣೆಯನ್ನು ವಿಶಿಷ್ಟವಗಿ ಆಚರಿಸಿಕೊಂಡರು.