ನವದೆಹಲಿ: ಏರುತ್ತಿರುವ ತಾಪಮಾನದಿಂದ ಭಾರತೀಯರಿಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಮುಂಬರುವ ದಿನಗಳಲ್ಲಿ ಬಿಸಿಗಾಳಿ ಚಾಲ್ತಿಯಲ್ಲಿರುತ್ತದೆ. ಬಿಸಿಲಿನ ಬೇಗೆ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರದ ತನ್ನ ಹವಾಮಾನ ಬುಲೆಟಿನ್ನಲ್ಲಿ ತಿಳಿಸಿದೆ.
ಮುಂಬರುವ ಐದು ದಿನಗಳವರೆಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ನಿಗಿ ನಿಗಿ ಕೆಂಡದಂತಹ ವಾತಾವರಣ ಇರಲಿದೆ. ಬಿಹಾರ, ಜಾರ್ಖಂಡ್, ಆಂಧ್ರದ ರಾಯಲಸೀಮಾ, ಕರ್ನಾಟಕದ ಒಳನಾಡು ಮತ್ತು ತಮಿಳುನಾಡಿನ ಬಹುತೇಕ ಕಡೆ ಬಿಸಿಗಾಳಿಯ ಮುನ್ಸೂಚನೆ ಇದೆ. ಪಶ್ಚಿಮ ಅಸ್ಸಾಂ, ಮೇಘಾಲಯ, ತ್ರಿಪುರಾದಲ್ಲಿ ಏಪ್ರಿಲ್ 28 ಮತ್ತು 29 ರಂದು ಬಿಸಿ ಮತ್ತು ಆರ್ದ್ರ ವಾತಾವರಣವನ್ನು ನಿರೀಕ್ಷಿಸಬಹುದು. ಕರಾವಳಿ ಕರ್ನಾಟಕ, ಕರಾವಳಿ ಆಂಧ್ರ ಮತ್ತು ಯಾನಂ, ಕೊಂಕಣ ಮತ್ತು ಗೋವಾದಲ್ಲಿ ಮೇ 2 ರವರೆಗೆ ಬಿಸಿ ಮತ್ತು ಆರ್ದ್ರ ವಾತಾವರಣವನ್ನು ನಿರೀಕ್ಷಿಸಲಾಗಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇನ್ನು ಅರುಣಾಚಲ ಪ್ರದೇಶದಲ್ಲಿ ಮೇ 2ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಜೊತೆಗೆ ಸಾಧಾರಣ ಮಳೆಯಾಗಬಹುದಾಗಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಏಪ್ರಿಲ್ 28 ರಿಂದ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಾಫರಾಬಾದ್, ಹಿಮಾಚಲ ಪ್ರದೇಶದಲ್ಲಿ ಸಾಧಾರಣದಿಂದ ಭಾರಿ ಮಳೆ ಮತ್ತು ಹಿಮಪಾತವನ್ನು ನಿರೀಕ್ಷಿಸಲಾಗಿದೆ. ಉತ್ತರಾಖಂಡದಲ್ಲಿ ಸಹ ಮಳೆಯಾಗುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿಯಲ್ಲಿ 2ದಿನ ಗುಡುಗು, ಬಿರುಗಾಳಿ ಜೊತೆಗೆ ಚದುರಿದಂತೆ ಆಲಿಕಲ್ಲು ಸಮೇತ ಮಳೆಯಾಗುತ್ತದೆ. ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ ಮತ್ತು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಲಘು ಮಳೆ, ಗುಡುಗು ಮತ್ತು ಬಿರುಗಾಳಿ ಬೀಸುವ ಮುನ್ಸೂಚನೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.