ಕುಂಬಳೆ : ಕುಂಬಳೆ ಸನಿಹದ ಪೆರಿಂಗಡಿ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನಿರಿಸುವ ಮೂಲಕ ರೈಲು ಬುಡಮೇಲುಗೊಳಿಸುವ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿದೆ. ರೈಲ್ವೆ ಹಳಿಯಲ್ಲಿರಿಸಿದ್ದ ಕಗ್ಗಲ್ಲಿನ ಮೇಲಿಂದ ರೈಲು ಸಂಚರಿಸಿದ್ದು, ಕೂದಲೆಳೆಯ ಅಂತರದಿಂದ ಅಪಘಾತ ತಪ್ಪಿದೆ. ಮದ್ರಾಸ್ ಮೈಲ್ ರೈಲು ಗಾಡಿ ಸಂಚರಿಸುವ ಮಧ್ಯೆ ಪೆರಿಂಗಡಿಯಲ್ಲಿ ಭಾರೀ ಶಬ್ಧ ಕೇಳಿ ಬಂದಿದ್ದು, ಲೋಕೋ ಪೈಲಟ್ ಹಾಗೂ ಪ್ರಯಾಣಿಕರು ವಿಚಲಿತರಾಗಿದ್ದರು. ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಆಸುಪಾಸಿನ ಜನತೆ ರೈಲ್ವೆ ಹಳಿಗೆ ಧಾವಿಸಿ ಬಂದಿದ್ದು, ಈ ಸಂದರ್ಭ ಹತ್ತು ಮೀ. ವರೆಗೂ ಕಗ್ಗಲ್ಲು ಇರಿಸಿರುವುದು ಬೆಳಕಿಗೆ ಬಂದಿತ್ತು. ಘಟನೆ ಬಗ್ಗೆ ಲೋಕೋ ಪೈಲಟ್ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದು, ಅಲ್ಲಿಂದ ಪಾಲಕ್ಕಾಡ್ ವಿಭಾಗಕ್ಕೆ ನೀಡಿದ ಮಾಹಿತಿಯನ್ವಯ ಆರ್ಪಿಎಫ್ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತನಿಖೆಗೆ ಚಾಲನೆ ನೀಡಿದ್ದಾರೆ.
ಮಂಜೇಶ್ವರದಿಂದ ಕೋಯಿಕ್ಕೋಡ್ ವರೆಗೆ ರೈಲ್ವೆ ಹಳಿಯಲ್ಲಿ ವಿಧ್ವಂಸಕ ಕೃತ್ಯ, ರೈಲಿಗೆ ಕಲ್ಲು ತೂರಾಟ ಸೇರಿದಂತೆ ನಿರಂತರ ಕಿಡಿಗೇಡಿ ಕ್ರತ್ಯ ನಡೆದುಬರುತ್ತಿದ್ದರೂ, ಆರೋಪಿಗಳ ಪತ್ತೆ ಸಾಧ್ಯವಾಗದಿರುವುದು ಕೃತ್ಯವೆಸಗುತ್ತಿರುವವರಿಗೆ ವರದಾನವಾಗುತ್ತಿದೆ.