ಕಾಸರಗೋಡು: ಬೇಸಿಗೆ ಮಳೆ ಜಿಲ್ಲೆಯಲ್ಲಿ ಮುಂದುವರಿದಿದ್ದು, ಮಂಗಳವಾರ ಜಿಲ್ಲೆಯ ವೆಳ್ಳರಿಕುಮಡುವಿನಲ್ಲಿ ಅತಿ ಹೆಚ್ಚು ಅಂದರೆ 24.5ಮಿ.ಮೀ ಮಳೆ ದಾಖಲಾಗಿದೆ. ಕೂಡ್ಲುವಿನಲ್ಲಿ 11.5 ಮಿ.ಮೀ, ಮುಳಿಯಾರಿನಲ್ಲಿ 6ಮಿ.ಮೀ, ಪಾಣತ್ತೂರಿನಲ್ಲಿ 13ಮಿ.ಮೀ ಹಾಗೂ ಪಿಲಿಕ್ಕೋಡಿನಲ್ಲಿ 1ಮಿ.ಮೀ ಮಳೆ ದಾಖಲಾಗಿದೆ.
ಕೇರಳಕ್ಕೆ ಮುಂದಿನ ಐದು ದಿವಸಗಳಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಲಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಈ ಬಾರಿ ಕೇರಳಕ್ಕೆ ಲಭಿಸಲಿದೆ. ಜುಲೈ-ಸೆಪ್ಟಂಬರ್ ತಿಂಗಳ ಕಾಲಾವಧಿಯಲ್ಲಿ ಹೆಚ್ಚಿನ ಮಳೆ ಲಭ್ಯವಾಗಲಿದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ. ಬೇಸಿಗೆ ಮಳೆ ಕೇರಳದಲ್ಲಿ ಬಿರುಸುಗೊಳ್ಳತೊಡಗಿದ್ದು, ಎರ್ನಾಕುಳಂ, ಕೋಟ್ಟಾಯಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೋಟ್ಟಾಯಂ ಜಿಲ್ಲೆಯ ನಾನಾ ಕಡೆ ಭಾರೀ ಭೂಕುಸಿತದಿಂದ ಏಳಕ್ಕೂ ಹೆಚ್ಚು ಮನೆಗಳು ಮಣ್ಣಿನೊಳಗಾಗಿದೆ.
ಬೇಸಿಗೆ ಮಳೆ ಮುಂದುವರಿಯುತ್ತಿರುವ ಮಧ್ಯೆ, ವಾರದೊಳಗೆ ಮುಂಗಾರೂ ಆಗಮಿಸಲಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸಲಾಗುತ್ತಿದೆ. ಗಾಳಿ ಹಾಗೂ ಸಿಡಿಲಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಜಿಲ್ಲಾಡಳಿತ ಜಾಗ್ರತಾ ನಿರ್ದೇಶದೊಂದಿಗೆ ವಿವಿಧೆಡೆ ನಿಯಂತ್ರಣ ಕೊಠಡಿಯನ್ನೂ ತೆರೆದಿದೆ.