ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ 2 ನೇ ವಾರ್ಡಿನ ಅಂಗನವಾಡಿ ಪಕ್ಕದಲ್ಲಿರುವ ಬಾವಿಯೊಂದು ತ್ಯಾಜ್ಯಗಳಿಂದ ತುಂಬಿ ಕಲುಷಿತಗೊಂಡಿದೆ.
ಸಂಬಂಧಪಟ್ಟವರು ಬಾವಿಯನ್ನು ಶುದ್ಧೀಕರಿಸದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಕಲುಷಿತಗೊಂಡ ಈ ನೀರನ್ನು ಅಂಗನವಾಡಿ ಮಕ್ಕಳು ಸಹಿತ ಈ ಕಾಲನಿಯಲ್ಲಿರುವವರು ಉಪಯೋಗಿಸುತಿದ್ದಾರೆ.
ಈ ಬಾವಿಯ ನೀರಿನ ಸ್ವಚ್ಚತೆ ಆಗಿಲ್ಲ. ಪಂಚಾಯತಿ ಅಧಿಕೃತರು ಈ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳು ಕೂಡಾ ಇದೇ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.
ಊರವರು ಈ ಬಗ್ಗೆ ಹಲವು ಸಲ ಸಂಬಂಧಪಟ್ಟವರನ್ನು ವಿನಂತಿಸಿಕೊಂಡರೂ ಯೂರೂ ಇತ್ತ ಕಡೆ ಗಮನ ಹರಿಸಿಲ್ಲವೆಂದು ಸ್ಥಳೀಯರು ಹೇಳುತಿದ್ದಾರೆ.
ಈ ಬಾವಿಯ ನೀರಿನಲ್ಲಿ ಕಸಕಡ್ಡಿ ಜೊತೆಯಾಗಿ ತ್ಯಾಜ್ಯ ಹಾಗೂ ಕೆಸರು ತುಂಬಿಕೊಂಡಿದೆ. ಬಾವಿಯಲ್ಲಿರುವ ನೀರಿನಲ್ಲಿ ಸಣ್ಣ ಪ್ರಮಾಣದ ಹುಳಗಳು ಕೂಡಾ ಆಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬಾವಿ ಇದೀಗ ಸಾಂಕ್ರಾಮಿಕ ರೋಗದ ಕೇಂದ್ರವಾಗಿ ಪರಿಣಮಿಸಿದೆ.
ಬಿರು ಬೇಸಿಗೆ ಮಧ್ಯೆ ನೀರಿನ ಕ್ಷಾಮ ವ್ಯಾಪಕವಾಗಿರುವಾಗ, ಲಭ್ಯ ನೀರನ್ನೂ ಸಂರಕ್ಷಿಸುವಲ್ಲಿ ಅಧಿಕೃತರು ತೋರಿಸುವ ನಿರ್ಲಕ್ಷ್ಯ ಅಕ್ಷಮ್ಯ. ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಳ್ಳಲು ಆಗ್ರಹಿಸಲಾಗಿದೆ.
ಅಭಿಮತ:
ನೀರಿನ ಕೊರತೆಯ ಮಧ್ಯೆ ಲಭ್ಯವಿರುವ ಏಕೈಕ ಬಾವಿಯ ದುರವಸ್ಥೆ ತೀವ್ರ ಹತಾಶೆ ಉಂಟುಮಾಡಿದೆ.ಅಧಿಕೃತರಿಗೆ ಮನವಿ ನೀಡಿದರೂ ಸ್ಪಂಧಿಸಿಲ್ಲ. ಸ್ಥಳೀಯರೇ ಬಾವಿಯನ್ನು ನಿರ್ಮಲಗೊಳಿಸಲು ಅವಕಾಶವಿಲ್ಲದ್ದರಿಂದ ದಾರಿ ಕಾಣದಾಗಿದೆ. ಈ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಲಾಗುವುದು.
-ನಾರಾಯಣ.
ಸ್ಥಳೀಯ ಕಾಲನಿ ನಿವಾಸಿ.