ಮುಳ್ಳೇರಿಯ: ಜಿಲ್ಲೆಯ ಗುಡ್ಡಗಳಲ್ಲಿ ಹಾಗೂ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಕಾಯಾವು ಅಥವಾ ಕಾಶಾವು ಎಂದು ಕರೆಯಲ್ಪಡುವ ಹೂವು ಅರಳಿ ನಿಂತಿರುವುದು ಕಣ್ಮನ ಸೆಳೆಯುತ್ತಿದೆ.
ಹವಾಮಾನ ಬದಲಾವಣೆಯಿಂದಾಗಿ ಕೆಲವೆಡೆ ಕಾಯಾವು ಪುಷ್ಪ ಈಗಷ್ಟೇ ಅರಳಲು ಆರಂಭಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಯಾವು ಹೂವುಗಳು ಅರಳಿ ಗಮನ ಸೆಳೆಯುತ್ತವೆ.
ನೈಸರ್ಗಿಕವಾಗಿ ಗುಡ್ಡ-ಬೆಟ್ಟಗಳು ಇಂದೀಗ ನಾಶಗೊಂಡು ಈ ಅಪೂರ್ವ ಹೂವು ಅಳಿವಿನಂಚಿನಲ್ಲಿದೆ. ಕಾಯಾವು ಅರಳುವುದು ಪುಣ್ಯವೆಂದು ಹಳೆಯ ತಲೆಮಾರು ಪರಿಗಣಿಸಿತ್ತು. ಮಣ್ಣಿನ ಸವಕಳಿ ತಡೆಯಲು ಬಲಿಷ್ಠ ಕಾಯಾವು ನೆಡಲಾಗುತ್ತಿತ್ತು. ಸುಂದರವಾದ ನೀಲಿ ಬಣ್ಣದ ಹೂವುಗಳು ಕಾಂಡಕ್ಕೆ ಅಂಟಿಕೊಂಡಿರುವ ಈ ಅಪೂರ್ವ ಸಸ್ಯ ಪ್ರಭೇದ ಪುದರುಗಳ ರೀತಿಯಲ್ಲಿ ಬೆಳೆಯುವಂತದ್ದು. 5 ರಿಂದ 8-10 ಅಡಿಗಳಷ್ಟು ಬೆಳೆಯುವ ಈ ಪುಷ್ಪಸಸ್ಯ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡಗಳಲ್ಲಿ, ಹೊಳೆ ಬದಿ, ಸಣ್ಣ ತೋಡು ಮುಂತಾದೆಡೆ ನೈಸರ್ಗಿಕವಾಗಿ ಬೆಳೆಯುತ್ತವೆ.
ಕಾಯಾವು (ಮಲೆಯಾಳಂನಲ್ಲಿ ಕಯಂಬು) ಹೆಚ್ಚು ನೆನಪಾಗುವುದು ಚಿತ್ರಗೀತೆಗಳು ಮತ್ತು ಕವಿತೆಗಳ ಮೂಲಕ. ಹಳೆಯ ಚಿತ್ರಗೀತೆಗಳಲ್ಲಿ ಈ ಪೊದರು ಗಿಡದ ಸುತ್ತ ನಾಯಕ-ನಾಯಕಿಯರು ಸುತ್ತಾಡುವುದು ಸಾಮಾನ್ಯ ದೃಶ್ಯವಾಗಿತ್ತು. ಪ್ರಮುಖ ಔಷಧೀಯ ಸಸ್ಯಗಳಲ್ಲಿ ಇದೂ ಒಂದಾಗಿದೆ.
ಹಳ್ಳಿಗಳಲ್ಲಿ ಕಾಶವ್ ಎಂಬ ಸ್ಥಳೀಯ ಹೆಸರಿಂದ ಕರೆಯಲ್ಪಡುವ ಈ ಗಿಡದ ಪ್ರಬಲ ಕಾಂಡದ ಕಾರಣದಿಂದ ಈ ಸಸ್ಯವನ್ನು ಹಳ್ಳಿಗರು ಚಾಕು ಹಿಡಿಕೆಯಾಗಿ, ಚೆಂಡೆ-ಡೋಲುಗಳೇ ಮೊದಲಾದ ವಾದ್ಯೋಪಕರಣಗಳ ಬಡಿಯುವ ಕೋಲುಗಳಾಗಿ ಬಳಸುತ್ತಿದ್ದರು.