ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ವಿಶೇಷವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಕೆಂಗಲ್ಲು ಹಾಗು ಕಗ್ಗಲ್ಲು ಕ್ವಾರೆಗಳು ಕಾರ್ಯಾಚರಿಸುತ್ತಿದ್ದು, ಅದರಲ್ಲಿ ಸಾವಿರಾರು ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶ ಪ್ರಕಾರ ಪ್ರಸ್ತುತ ಕಂದಾಯ ಹಾಗು ಜಿಯೋಲಜಿ ವಿಭಾಗದವರು ಕ್ವಾರೆಗಳಿಗೆ ದಾಳಿ ನಡೆಸಿ ಅದನ್ನು ಮುಚ್ಚುಗಡೆಗೊಳಿಸಲು ಆದೇಶ ನೀಡುವ ಮೂಲಕ ಕೆಂಗಲ್ಲು ಉದ್ಯಮವೇ ನಿಂತು ಹೋಗುವ ಭೀತಿಯನ್ನು ಎದುರಿಸುತ್ತದೆ ಎಂದು ಸಿಪಿಐ ಆರೋಪಿಸಿದೆ.
ಕೆಂಗಲ್ಲು ಕ್ವಾರೆಗಳಿಗೆ ದಾಳಿ ನಡೆಸುವುದು, ಅಲ್ಲಿಗೆ ಬರುವ ಹಾಗು ಹೋಗುವ ವಾಹನಗಳನ್ನು ಮುಟ್ಟುಗೋಲು ಹಾಕುವುದು, ಲಕ್ಷಗಟ್ಟಲೆ ದಂಡ ವಿಧಿಸುವ ಮೂಲಕ ಉದ್ಯಮದಿಂದಲೇ ಹಿಂದೆ ಸರಿಯುವಂತೆ ಪ್ರೇರೇಪಿಸುವುದು, ನಿರ್ಮಾಣ ವಲಯಕ್ಕೆ ಬೇಕಾದ ಕಲ್ಲು, ಜಲ್ಲಿ ಸಕಾಲಕ್ಕೆ ದೊರಕದೆ ನಿರ್ಮಾಣ ವಲಯವನ್ನು ಸಂದಿಗ್ಧತೆಯಲ್ಲಿದೆ. ಇದನ್ನೇ ನಂಬಿರುವ ಸಾವಿರಾರು ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಮಧ್ಯೆ ಪ್ರವೇಶಿಸಬೇಕೆಂದು ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಜಯರಾಮ ಬಲ್ಲಂಗುಡೇಲ್, ರಾಮಚಂದ್ರ ಸುರಿಬೈಲ್, ಅಜಿತ್ ಎಂ.ಸಿ. ಲಾಲ್ಭಾಗ್ ಮೊದಲಾದವರು ಮಾಜಿ ಕಂದಾಯ ಸಚಿವ, ಸಿಪಿಐ ರಾಜ್ಯ ಸಹಕಾರ್ಯದರ್ಶಿ ಇ.ಚಂದ್ರಶೇಖರನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಇ.ಚಂದ್ರಶೇಖರನ್ ಈ ಬಗ್ಗೆ ಕೇರಳ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿದ ತಿದ್ದುಪಡಿ ಮಸೂದೆಗೆ ಸಹಿ ಹಾಕಿದ್ದು, ಅದಕ್ಕೆ ಸಂಬಂಧಪಟ್ಟ ಕಾನೂನು ರೂಪೀಕರಿಸಿ ಅಂಗೀಕರಿಸಿದ ನಂತರ ಅಗತ್ಯವಿರುವ ಕಡೆ ಕೆಂಗಲ್ಲು ಕ್ವಾರೆ ಆರಂಭಿಸಲು ಪರವಾನಿಗೆ ನೀಡಿ ಈ ಉದ್ಯಮವನ್ನು ಅಧಿಕೃತಗೊಳಿಸಿ ಆ ಮೂಲಕ ಕಾರ್ಮಿಕರನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಬಾಬು, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪ್ಪಿಲ್ ಜೊತೆಗಿದ್ದರು.