ಕಾಸರಗೋಡು: ಕಾಸರಗೋಡು ನಗರದಲ್ಲಿ ಸ್ವಜನ ಪಕ್ಷಪಾತ ಆಡಳಿತ ನಡೆಯುತ್ತಿದೆ. ಅಭಿವೃದ್ಧಿ ಕುಂಠಿತಗೊಂಡಿದೆ. ಕಚೇರಿಯ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ. ಭ್ರಷ್ಟಾಚಾರದ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾಸರಗೋಡು ನಗರ ಸಮಿತಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಕಾಸರಗೋಡು ನಗರದ ಹೃದಯ ಭಾಗವಾದ ಕರಂದಕ್ಕಾಡ್ನಿಂದ ತಾಳಿಪಡ್ಪುವರೆಗಿನ ಪ್ರದೇಶ ಸಂಪೂರ್ಣ ಕತ್ತಲೆಯಿಂದ ಮುಳುಗಿದೆ. ಇದು ನಗರಸಭೆಯ ದುರಾಡಳಿತಕ್ಕೆ ಜ್ವಲಂತ ಸಾಕ್ಷಿ ಎಂದು ಬಿಜೆಪಿ ಆರೋಪಿಸಿದೆ. ಹೆದ್ದಾರಿ ನಿರ್ಮಾಣದ ನೆಪ ಹೇಳಿ ಕಾಸರಗೋಡು ನಗರಸಭೆ ತನ್ನ ಕರ್ತವ್ಯದಿಂದ ಜಾರಿಕೊಳ್ಳುತ್ತಿದೆ. ಕೆಟ್ಟು ಹೋದ ದಾರಿ ದೀಪಗಳನ್ನು ಕೂಡಾ ದುರಸ್ತಿಗೊಳಿಸಲು ನಗರಸಭೆ ಮುಂದಾಗುತ್ತಿಲ್ಲ. ಕತ್ತಲೆ ಆವರಿಸಿರುವುದರಿಂದ ಜನರಿಗೆ ನಡೆದಾಡಲು ಆಗದಂತಹ ಸ್ಥಿತಿ ಉಂಟಾಗಿದೆ. ವೇಗದಲ್ಲಿ ಆಗಮಿಸುವ ವಾಹನಗಳಿಂದ ಅಪಾಯ ಭೀತಿ ಎದುರಾಗುತ್ತಿದೆ. ಜನಸಾಮಾನ್ಯರ ಜೀವಕ್ಕೂ ಬೆಲೆ ಕೊಡದ ನಗರಸಭೆಯ ಸ್ಥಿತಿ ಖಂಡನೀಯ ಎಂದಿದೆ. ಮುಂದಿನ ದಿನಗಳಲ್ಲಿ ಈ ನಿರ್ಲಕ್ಷ್ಯ ನೀತಿಯನ್ನು ಬದಲಾಯಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮುನ್ನೆಚ್ಚರಿಕೆ ನೀಡಿದೆ.