ಪೆರ್ಲ : ವಿದ್ಯಾರ್ಥಿಯೊಬ್ಬ ಎಸ್ಸೆಸೆಲ್ಸಿ ಪರೀಕ್ಷೆಯ ತನ್ನ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಕಳುಹಿಸಿಕೊಡುವ ಮೂಲಕ ಪೆರ್ಲದ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಕೊನೆಗೂ ಶೇ. ನೂರು ಫಲಿತಾಂಶದೊಂದಿಗೆ ಗೆಲುವಿನ ನಗೆ ಬೀರಿದೆ.
2024ಮಾರ್ಚ್ ತಿಂಗಳಲ್ಲಿ ನಡೆದ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಯಿಂದ 105ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟಗೊಂಡಾಗ ಮಹಮ್ಮದ್ ಶರ್ಫುದ್ದೀನ್ ಎಂಬ ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿರುವುದರಿಂದ ಶಾಲೆಗೆ ಲಭಿಸಬೇಕಾದ ಶೇ. ನೂರರ ಫಲಿತಾಂಶ ಕೈತಪ್ಪಿತ್ತು. ಶಾಲಾ ಮುಖ್ಯಶಿಕ್ಷಕರು ಹಾಗೂ ಇತರ ಅಧ್ಯಾಪಕರ ಒತ್ತಡದೊಂದಿಗೆ ಈ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಕಳುಹಿಸಿಕೊಡಲಾಯಿತು. ಜತೆಗೆ ವಿದ್ಯಾರ್ಥಿಗಳಿಗೆ ಉಂಟಾಗುವ ಒಂದು ವರ್ಷದ ನಷ್ಟ ತಪ್ಪಿಸಲು ಸರ್ಕಾರ ಜಾರಿಗೆ ತಂದಿರುವ ವಿಶೇಷ ಯೋಜನೆ ಸೇವ್ ಎ ಇಯರ್(ಎಸ್ಎವೈ-'ಸೇ')ಎಂಬ ವ್ಯವಸ್ಥೆಯೊಂದಿಗೆ ಮರು ಪರೀಕ್ಷೆಗೂ ಅರ್ಜಿ ಸಲ್ಲಿಸಿದ್ದರು. 'ಸೇ'ಪರೀಕ್ಷೆ ದಿನಾಂಕ ಎದುರು ನೋಡುತ್ತಿರುವ ಮಧ್ಯೆ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಳ್ಳುವ ಮೂಲಕ ವಿದ್ಯಾರ್ಥಿ ಹಾಗೂ ಶಾಲೆ ಪಾಲಿಗೆ ಸಂತಸದ ವಾತಾವರಣ ತಂದುಕೊಟ್ಟಿದೆ.
ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿರುವುದರಿಂದ ಸಹಜವಾಗಿ ಆಡಳಿತ ಮಂಡಳಿ, ಶಿಕ್ಷಕ, ವಿದ್ಯಾರ್ಥಿ ಸಮೂಹದಲ್ಲಿ ನಿರಾಸೆ ತಂದುಕೊಟ್ಟಿತ್ತು. ಮರುಮೌಲ್ಯಮಾಪನದೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆ ಶೇ. ನೂರು ಫಲಿತಾಂಶದ ಗೆಲುವಿನ ನಗೆ ಬೀರುಂತಾಗಿದೆ ಎಂದು ಮುಖ್ಯ ಶಿಕ್ಷಕ ಎನ್.ಕೆ ಕೇಶವ ಪ್ರಕಾಶ್ ತಿಳಿಸಿದ್ದಾರೆ. ಪರೀಕ್ಷೆ ಎದುರಿಸಿದ 105ಮಂದಿಯಲ್ಲಿ 13ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿ 'ಎ ಪ್ಲಸ್'ಫಲಿತಾಂಶ ದಾಖಲಿಸಿಕೊಂಡಿದ್ದಾರೆ.